ಮಡಿಕೇರಿ: ಮಳೆಹಾನಿ ಸಂತ್ರಸ್ತರಿಗೆ ಚೇರಂಡ ಕುಟುಂಬಸ್ಥರು, 15 ಮಂದಿ ಸಂತ್ರಸ್ತರಿಗೆ ₹ 1.50 ಲಕ್ಷ ನೆರವು ನೀಡಿದರು.
ನಗರದ ಫೋರ್ಟ್ ಮರ್ಕರ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪ್ರತಿ ಸಂತ್ರಸ್ತ ಕುಟುಂಬಕ್ಕೆ ₹ 10 ಸಾವಿರದಂತೆ ಕುಟುಂಬದ ಹಿರಿಯರಾದ ಚೇರಂಡ ಉತ್ತಯ್ಯ ಚೆಕ್ ಹಸ್ತಾಂತರಿಸಿದರು.
ಪ್ರಕೃತಿ ವಿಕೋಪದಿಂದ ಸಾವು–ನೋವು ಸಂಭವಿಸಿದೆ. ವಿವಿಧ ಸಂಘ ಸಂಸ್ಥೆಗಳು ತಕ್ಷಣದಲ್ಲಿ ಸಂತ್ರಸ್ತರ ನೋವಿಗೆ ಸ್ಪಂದಿಸಿರುವುದು ಶ್ಲಾಘನೀಯ. ಸಂತ್ರಸ್ತರು ತಮಗೆ ದೊರೆತ ಸಹಾಯಧನವನ್ನು ಸದುಯೋಗಪಡಿಸಿಕೊಂಡು ನೋವನ್ನು ಮರೆತು ಹೊಸ ಜೀವನವನ್ನು ಆರಂಭಿಸಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ಡಾ.ಸೂರ್ಯಮುದ್ದಪ್ಪ ಮಾತನಾಡಿ, ಸಂತ್ರಸ್ತರು ಸಂಕಷ್ಟ ಎದುರಾಗಿದೆ ಎಂಬ ಕಾರಣಕ್ಕಾಗಿ ಎದೆಗುಂದದೆ, ಧೈರ್ಯದಿಂದ ಮುನ್ನುಗ್ಗಬೇಕು. ಸಂಘ– ಸಂಸ್ಥೆಗಳು ನೀಡುವ ಸಹಕಾರದ ಜತೆಗೆ ತಮ್ಮ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಂಡು ಮತ್ತೆ ಎಂದಿನಂತಾಗಬೇಕು ಎಂದರು.
ಪತ್ರಕರ್ತ ಮಹೇಶ್ ನಾಚಯ್ಯ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಿ ವಿವಿಧ ಭಾಗಗಳಿಂದ ಪರಿಹಾರ ಹರಿದು ಬಂದಿದ್ದರೂ ತಮಗೆ ಇನ್ನೂ ಪರಿಹಾರ ದೊರೆತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿರುವುದು ವಿಷಾದನೀಯ ಎಂದರು.