ಮಡಿಕೇರಿ: ಕಾವೇರಿ ಕಲಾಕ್ಷೇತ್ರದಲ್ಲಿ ಬುಧವಾರ ನಗರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ರಸ್ತೆ, ನೀರು, ಚರಂಡಿ, ಕಸ ವಿಲೇವಾರಿ... ಹೀಗೆ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರು ಬೆಳಕು ಚೆಲ್ಲಿದರು.
ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಧ್ಯಕ್ಷತೆವಹಿಸಿದ್ದ ಸಭೆಯಲ್ಲಿ ವರ್ತಕ ಅಯ್ಯಪ್ಪ ಮಾತನಾಡಿ, ಕುಂಡಾಮೇಸ್ತ್ರಿ ಹಾಗೂ ರೋಷನಾರ ಕೆರೆಗಳು ನೀರು ಬತ್ತುತ್ತಿದೆ. ಅದ್ದರಿಂದ ಹೆಚ್ಚು ಸಾಮರ್ಥ್ಯವುಳ್ಳ ಟ್ಯಾಂಕ್ ನಿರ್ಮಾಣ ಮಾಡಬೇಕು ಎಂದು ಕೋರಿದರು.
ಪಂಪಿನಕೆರೆಯಲ್ಲಿ ಪ್ರಕೃತಿ ವಿಕೋಪದ ನಂತರ ಬಿರುಕು ಕಾಣಿಸಿಕೊಂಡು ನೀರು ಸಂಗ್ರಹವಾಗುತ್ತಿಲ್ಲ. ಅದನ್ನು ಶೀಘ್ರವೇ ದುರಸ್ತಿಪಡಿಸಬೇಕು ಎಂದು ಮನವಿ ಮಾಡಿದರು.
ರಾಜಾಸೀಟ್ನಿಂದ ಎಫ್ಎಂಸಿ ಕಾಲೇಜು ತನಕ ತಡೆಗೋಡೆ ನಿರ್ಮಾಣ ಮಾಡಿ, ಬೀದಿದೀಪಗಳನ್ನು ಅಳವಡಿಸಬೇಕು ಎಂದು ಮನವಿ ಮಾಡಿದರು.
ರೇಸ್ಕೋರ್ಸ್ ನಿವಾಸಿ ಪಾಲಿ ಮಾದಪ್ಪ ಮಾತನಾಡಿ, ಪ್ರಮುಖ ರಸ್ತೆಗಳಲ್ಲಿ ಫುಟ್ಪಾತ್ ನಿರ್ಮಾಣ ಮಾಡಬೇಕು ಎಂದು ಹೇಳಿದರು.
ಮಹಾದೇವಪೇಟೆ ನಿವಾಸಿ ಪ್ರದೀಪ್ಕುಮಾರ್ ಮಾತನಾಡಿ, ನಗರಸಭೆಯ ಮೂರು ಶಾಲೆಗಳಲ್ಲಿ ಒಂದು ಶಾಲೆಗೆ ಮಾತ್ರ ವಿದ್ಯಾರ್ಥಿಗಳಿಗೆ ಆಟದ ಮೈದಾನವಿದೆ. ಉಳಿದ ಶಾಲೆಗಳಿಗೂ ಆಟದ ಮೈದಾನ ಕಲ್ಪಿಸಬೇಕು ಎಂದು ಕೋರಿದರು.
ನಗರವಾಸಿಗಳಾದ ಹನೀಫ್, ರಾಜು, ಮೋಂತಿ ಗಣೇಶ್, ಉಷಾ ಉತ್ತಯ್ಯ, ತೆನ್ನೀರಾ ಮೈನಾ ಸೇರಿದಂತೆ ಸಾರ್ವಜನಿಕರು ಪಾರ್ಕಿಂಗ್ ಸಮಸ್ಯೆ, ಯುಜಿಡಿ ಸಮಸ್ಯೆ, ಬೀದಿ ನಾಯಿಗಳ ಕಾಟ, ಕಸ ವಿಲೇವಾರಿ ಸಮಸ್ಯೆ ಕುರಿತು ಬೆಳಕು ಚೆಲ್ಲಿದರು.
ಪೌರಾಯುಕ್ತ ರಮೇಶ್, ಸದಸ್ಯರಾದ ಜುಲೇಕಾಬಿ, ಶ್ರೀಮತಿ ಬಂಗೇರ, ಪೀಟರ್, ಲಕ್ಷ್ಮಿ ಹಾಜರಿದ್ದರು.