‘ಸೇನಾ ಕ್ಷೇತ್ರದಲ್ಲಿ ವೀರ ಸೇನಾನಿಗಳು ಬೆಳಗಲಿ’

ಮಡಿಕೇರಿ: ಕೊಡವ ಮಕ್ಕಡ ಕೂಟದಿಂದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 56ನೇ ಪುಣ್ಯಸ್ಮರಣೆಯನ್ನು ಮಂಗಳವಾರ ಆಚರಣೆ ಮಾಡಲಾಯಿತು.
ದೇವಯ್ಯ ಅವರ ಭಾವಚಿತ್ರಕ್ಕೆ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ, ಮೇಜರ್ ನಂಜಪ್ಪ ಸೇರಿದಂತೆ ಪ್ರಮುಖರು ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಶಾಸಕ ಅಪ್ಪಚ್ಚುರಂಜನ್, ವೀರರು ಹುಟ್ಟಿದ ನಾಡು ಕೊಡಗು ಜಿಲ್ಲೆಯ ಯುವ ಸಮೂಹ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ದೇಶವನ್ನು ಕಾಯುವ ಕೆಲಸ ಮಾಡಬೇಕು ಎಂದರು.
ವೀರರ ನಾಡೆನಿಸಿರುವ ಕೊಡಗಿನಲ್ಲಿ ಮತ್ತಷ್ಟು ವೀರ ಸೇನಾನಿಗಳು ಹುಟ್ಟಿಕೊಳ್ಳಬೇಕು; ಆ ಮೂಲಕ ಸೇನಾ ಕ್ಷೇತ್ರದಲ್ಲಿ ಬೆಳಗಬೇಕು. ವೀರ ಯೋಧರ ಸ್ಮರಣೆಯೊಂದಿಗೆ ಪ್ರತಿಯೊಬ್ಬರು ದೇಶಾಭಿಮಾನವನ್ನು ಮೆರೆಯಬೇಕು ಎಂದು ವೀಣಾ ಅಚ್ಚಯ್ಯ ಹೇಳಿದರು.
ನಿವೃತ್ತ ಮೇಜರ್ ನಂಜಪ್ಪ ಮಾತನಾಡಿ, ಅಜ್ಜಮಾಡ ದೇವಯ್ಯ ಅವರು ಪಾಕಿಸ್ತಾನಕ್ಕೆ ತಕ್ಕ ಪಾಠವನ್ನು ಕಲಿಸುವ ಮೂಲಕ ವೀರರೆನಿಸಿಕೊಂಡರು. ಈ ಇತಿಹಾಸವನ್ನು ಮುಂದಿನ ಪೀಳಿಗೆ ಸದಾ ಸ್ಮರಿಸುವಂತಾಗಬೇಕು ಎಂದರು.
ದೇವಯ್ಯ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಮಾತನಾಡಿ, ಭಾರತ– ಪಾಕಿಸ್ತಾನದ ನಡುವಿನ ಯುದ್ಧದಲ್ಲಿ ದೇವಯ್ಯ ಅವರು ಸಾಹಸ ಮೆರೆದು ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರವನ್ನು ಮರಣೋತ್ತರವಾಗಿ ಪಡೆದ ದೇವಯ್ಯ ಅವರು ಮುಂದಿನ ಪೀಳಿಗೆಗೆ ಮಾದರಿಯಾಗಿದ್ದಾರೆ. ಅವರ ತ್ಯಾಗ ಬಲಿದಾನ ಅವಿಸ್ಮರಣೀಯ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ, ನಗರಸಭೆ ಪೌರಾಯುಕ್ತ ರಾಮದಾಸ್, ಕೂಟದ ಗೌರವ ಕಾರ್ಯದರ್ಶಿ ಪುತ್ತರಿರ ಕರುಣ್ಕಾಳಯ್ಯ, ಫೀ.ಮಾ. ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸುಬ್ಬಯ್ಯ, ಸಂಚಾಲಕ ಮೇಜರ್ ನಂಜಪ್ಪ, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಅಜ್ಜಮಾಡ ಕುಟುಂಬದ ಅಧ್ಯಕ್ಷ ಅಜ್ಜಮಾಡ ಲವಕುಶಾಲಪ್ಪ ಅವರು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.