ಮಡಿಕೇರಿ: ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಪೊಲೀಸ್ ಧ್ವಜ ದಿನಾಚರಣೆ ನಡೆಯಿತು.
ವಿವಿಧ ತುಕಡಿಗಳಿಂದ ನಿವೃತ್ತ ಪೊಲೀಸ್ ಇನ್ ಸ್ಪೆಕ್ಟರ್ ಶಿವಶಂಕರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಗೌರವ ವಂದನೆ ಸ್ಬೀಕರಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಟ್ರೋಫಿಯನ್ನು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಭಾಗಮಂಡಲ ಠಾಣೆಯ ಹೆಡ್ ಕಾನ್ ಸ್ಟೆಬಲ್ ಸುನಿಲ್ ಕುಮಾರ್ ಅವರಿಗೆ ಹಾಗೂ ವಿಶೇಷ ಘಟಕಗಳ ಉತ್ತಮ ಟ್ರೋಫಿಯನ್ನು ಜಿಲ್ಲಾ ಸಶಸ್ತ್ರ ಪಡೆಯ ಕಾನ್ ಸ್ಟೆಬಲ್ ಪ್ರದೀಪ್ ಅವರಿಗೆ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪೊಲೀಸ್ ಇಲಾಖೆಯಲ್ಲಿ ಎಲ್ಲ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗೆ ತಮ್ಮ ಹಂತದಲ್ಲಿ ಸಮುದಾಯ ಸುಧಾರಣೆ ಮಾಡುವ ಅವಕಾಶಗಳಿವೆ. ಅದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲರಿಗೂ ತಾವು ಮಾಡುವ ಕೆಲಸದ ಬಗ್ಗೆ ಗೌರವ ಇರಬೇಕು ಎಂದು ಹೇಳಿದರು.