ಗೋಣಿಕೊಪ್ಪಲು: ಪೊನ್ನಂಪೇಟೆ ಕ್ರೀಡಾ ವಸತಿ ಶಾಲೆಯ ತರಬೇತುದಾರ ಬುಟ್ಟಿಯಂಡ ಚಂಗಪ್ಪ ಅವರು ಸೋಮವಾರ ಹಾಕಿ ಸ್ಟಿಕ್ನಿಂದ ಥಳಿಸಿದ್ದರಿಂದ ತಮ್ಮ ಮಗ, ಹಾಕಿ ವಿದ್ಯಾರ್ಥಿ ವಿಫುಲ್ ಉತ್ತಪ್ಪನ (13) ಮುಂಗೈ ಮುರಿದಿದೆ ಎಂದು ಪೋಷಕರು ದೂರಿದ್ದಾರೆ.
‘ತರಬೇತಿ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಎಂಬ ಕಾರಣಕ್ಕೆ ಥಳಿಸಿದ್ದಾರೆ. ಬಲಗೈಗೆ ತೀವ್ರ ಪೆಟ್ಟು ಬಿದ್ದಿದ್ದು ಮುಂಗೈ ಮೂಳೆ ಮುರಿದಿರುವುದು ಎಕ್ಸರೇಯಿಂದ ಪತ್ತೆಯಾಗಿದೆ’ ಎಂದು ಪೋಷಕ ಉತ್ತಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತರಬೇತುದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ವಸತಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಭೇಟಿ ನೀಡಿ ಪರಿಶೀಲಿಸಿದರು. ‘ಘಟನೆ ಬಗ್ಗೆ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು ’ಎಂದು ಹೇಳಿದರು. ‘ಉದ್ದೇಶ ಪೂರ್ವಕವಾಗಿ ವಿದ್ಯಾರ್ಥಿಯನ್ನು ಥಳಿಸಿಲ್ಲ. ಅದು ಆಕಸ್ಮಿವಾಗಿ ನಡೆದ ಘಟನೆ’ ಎಂದು ತರಬೇತುದಾರ ಪ್ರತಿಕ್ರಿಯಿಸಿದರು.