ನಾಪೋಕ್ಲು (ಕೊಡಗು ಜಿಲ್ಲೆ): ಸಮೀಪದ ದೊಡ್ಡಪುಲಿಕೋಟು ಗ್ರಾಮದಲ್ಲಿ ಭಾನುವಾರ ಅಲ್ಯುಮಿನಿಯಂ ಏಣಿ ಸಹಾಯದಿಂದ ಕಾಫಿ ತೋಟದಲ್ಲಿ ಮರದ ರೆಂಬೆಯನ್ನು ಕತ್ತರಿಸುವಾಗ ವಿದ್ಯುತ್ ಪ್ರವಹಿಸಿ, ಮೂವರು ಕಾರ್ಮಿಕರು ಸಾವನ್ನಪ್ಪಿ, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾಯನ ತಮ್ಮಯ್ಯ (40), ಅನಿಲ್ (45) ಮತ್ತು ಅನಿಲ್ ಅವರ ಪತ್ನಿ ಕವಿತಾ (36) ಮೃತಪಟ್ಟ ಕಾರ್ಮಿಕರು. ಸುನಿತಾ (28) ಅವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರೆಲ್ಲೂ ದೊಡ್ಡಪುಲಿಕೋಟು ಗ್ರಾಮದ ಮಾದೆಯಂಡ ಕುಂಞಪ್ಪ ಅವರ ತೋಟದಲ್ಲಿ ಮರಗಸಿ ಕೆಲಸ ಮಾಡುತ್ತಿದ್ದರು. ಅಲ್ಯುಮಿನಿಯಂ ಏಣಿಯು ಜಾರಿ ತೋಟದ ಮಧ್ಯೆದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗುಲಿದೆ. ಅದರ ಅರಿವಿಲ್ಲದೆ ಏಣಿಯನ್ನು ಸರಿಪಡಿಸಲು ಮುಟ್ಟಿದಾಗ ಮೂವರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕೊನೆಯಲ್ಲಿ ಏಣಿ ಮುಟ್ಟಲು ಮುಂದಾದ ತಮ್ಮಯ್ಯ ಅವರ ಪತ್ನಿ ಚೈತ್ರಾ ಅವರನ್ನು ಕುಂಞಪ್ಪ ರಕ್ಷಿಸಿದ್ದಾರೆ.
ಕರವಂಡ ಸುರೇಶ ಅವರ ಲೈನ್ಮನೆಯಲ್ಲಿ ವಾಸವಾಗಿದ್ದ ಇವರು ಕೂಲಿ ಕೆಲಸಕ್ಕಾಗಿ ಮಾದೆಯಂಡ ಕುಂಞಪ್ಪ ಅವರ ತೋಟಕ್ಕೆ ಭಾನುವಾರ ಬಂದಿದ್ದರು.
ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 1ರಂದು ವಿರಾಜಪೇಟೆ ತಾಲ್ಲೂಕಿನ ಅರ್ವತೊಕ್ಲು ಗ್ರಾಮದಲ್ಲಿ ಮರದಿಂದ ತೆಂಗಿನಕಾಯಿ ಕೀಳುತ್ತಿರುವಾಗ ವಿದ್ಯುತ್ ತಂತಿ ಮೇಲೆಯೇ ಅಲ್ಯುಮಿನಿಯಂ ಏಣಿ ಜಾರಿ ಬಿದ್ದು ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದರು. ಅಂಥಹದ್ದೇ ಮತ್ತೊಂದು ಅವಘಡ ಕೊಡಗು ಜಿಲ್ಲೆಯಲ್ಲಿ ನಡೆದಿದೆ.