ಮಡಿಕೇರಿ: ಗಾಂಧಿ ಮೈದಾನಕ್ಕಾಗಿ ‘ಹೋರಾಟ’

ಮಡಿಕೇರಿ: ಇಲ್ಲಿನ ಗಾಂಧಿ ಮೈದಾನವು ಅವ್ಯವಸ್ಥೆಯ ಆಗರವಾಗಿದ್ದು, ಜಿಲ್ಲಾಡಳಿತವು ತಕ್ಷಣ ಮೈದಾನವನ್ನು ಸುಸ್ಥಿತಿಯಲ್ಲಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಆಮ್ ಆದ್ಮಿ ಪಕ್ಷದ ಕೊಡಗು ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕ್ರೀಡಾಪಟುಗಳು, ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಮತ್ತು ಸಭೆ, ಸಮಾರಂಭಗಳನ್ನು ನಡೆಸಲು ಯೋಗ್ಯವಾಗಿದ್ದ ಗಾಂಧಿ ಮೈದಾನ ಈಗ ಅವ್ಯವಸ್ಥೆಯಿಂದ ಕೂಡಿದೆ. ಮಣ್ಣಿನ ರಾಶಿ ಹಾಕಲಾಗಿದೆ. ಅದನ್ನು ತೆರವುಗೊಳಿಸಿ ಸ್ವಚ್ಛತೆಯನ್ನು ಕಾಪಾಡುವ ಮೂಲಕ ಜಿಲ್ಲಾಡಳಿತವು ಅ.2ರಂದು ಗಾಂಧಿ ಜಯಂತಿಯನ್ನು ಗಾಂಧಿ ಮೈದಾನಲ್ಲೇ ಆಚರಿಸಬೇಕು ಎಂದು ಆಗ್ರಹಿಸಿದರು.
ಸ್ವಚ್ಛತೆ ಮಾಡದಿದ್ದರೆ ಕ್ರೀಡಾಭಿಮಾನಿಗಳು ಮತ್ತು ನಾಗರಿಕರ ಸಹಕಾರದೊಂದಿಗೆ ತೀವ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಆಪ್ನ ಕೊಡಗು ಜಿಲ್ಲಾ ಉಸ್ತುವಾರಿ ಕೋಳಿಬೈಲು ಚಿಣ್ಣಪ್ಪ ವೆಂಕಟೇಶ್ ಹಾಗೂ ಜಿಲ್ಲಾ ಸಂಚಾಲಕ ಎಚ್.ಬಿ.ಪ್ರಥ್ವಿ ಎಚ್ಚರಿಕೆ ನೀಡಿದ್ದಾರೆ.
ಕಳೆದ ಅನೇಕ ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳು ಆಟವಾಡಿದ ಮೈದಾನ ಈಗ ಮಣ್ಣಿನ ರಾಶಿ ಹಾಕುವ ಪ್ರದೇಶವಾಗಿ ಮಾರ್ಪಟ್ಟಿರುವುದು ದುರಂತ. ಇದೇ ಮೈದಾನದಲ್ಲಿ ಗಾಂಧಿ ಮಂಟಪ ಮತ್ತು ರಂಗ ಮಂದಿರವೂ ಇದ್ದು, ಯಾವುದಕ್ಕೂ ಗೌರವವಿಲ್ಲದಾಗಿದೆ. ನಗರದಲ್ಲಿ ಮೈದಾನದ ಕೊರತೆ ಕಾಡುತ್ತಿದ್ದು ಇದರ ನಡುವೆಯೇ ಇರುವ ಮೈದಾನವನ್ನು ಕೂಡ ಹಾಳುಗೆಡವಲಾಗುತ್ತಿದೆ. ಗಾಂಧಿ ಮಂಟಪದ ಬಳಿ ಅವೈಜ್ಞಾನಿಕ ರೂಪದಲ್ಲಿ ಬೇಲಿ ನಿರ್ಮಿಸಿ, ಮೈದಾನದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಅಲ್ಲದೇ ಈ ಬೇಲಿ ಹಾಕುವ ಮಂಟಪದ ಅಂದಕ್ಕೆ ಧಕ್ಕೆ ತರಲಾಗಿದೆ ಎಂದು ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರ ಉಪಯೋಗಕ್ಕೆಂದು ಮೀಸಲಾಗಿರುವ ಆಟದ ಮೈದಾನದಲ್ಲಿ ಮಣ್ಣಿನ ರಾಶಿ ಹಾಕಿ, ಕಾನೂನನ್ನು ಉಲ್ಲಂಘಿಸಲಾಗಿದೆ. ಮಣ್ಣನ್ನು ತೆರವುಗೊಳಿಸಿ ಈ ಮೊದಲಿನಂತೆ ಮೈದಾನವನ್ನು ಸುಸಜ್ಜಿಗೊಳಿಸಬೇಕು ಎಂದು ಚಿಣ್ಣಪ್ಪ ವೆಂಕಟೇಶ್ ಒತ್ತಾಯಿಸಿದರು.
ತಾಲ್ಲೂಕು ಉಸ್ತುವಾರಿ ಎಚ್.ಜಿ.ಬಾಲಸುಬ್ರಮಣ್ಯ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.