ನಾಪೋಕ್ಲು: ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದ ದೇವನೂರು ಗೌಡ ಒಕ್ಕೂಟದ ವತಿಯಿಂದ ಎರಡು ದಿನಗಳ ಕಾಲ ನಡೆದ ಬೆಳ್ಳಿ ಹಬ್ಬದ ರೈತ ಸಂಭ್ರಮ- 2023 ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಆಟೋಟಗಳಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.
24 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದ ಗೌಡ ಒಕ್ಕೂಟ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಆಟೋಟಗಳನ್ನು ಶನಿವಾರ ಆಯೋಜಿಸಿತ್ತು. ಪ್ರಾಥಮಿಕ ಹಾಗೂ ಪ್ರೌಢಶಾಲಾ ಪಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದ 100 ಮೀಟರ್ ಸ್ಪರ್ಧೆ ಓಟದ ಸ್ಪರ್ಧೆ,100x4 ಮೀ.ರಿಲೇ, ಚಿಣ್ಣರ ಓಟ, ಅದೃಷ್ಟದಾಟ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಹಿರಿಯರು, ಮಕ್ಕಳು ಪಾಲ್ಗೊಂಡು ಸಂಭ್ರಮಿಸಿದರು. ಗ್ರಾಮೀಣ ಕ್ರೀಡೆಗಳೊಂದಿಗೆ ಹಾಡು, ನೃತ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜನರನ್ನು ರಂಜಿಸಿದವು.
ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಭಾರದ ಕಲ್ಲು ಎಸೆತ, 100 ಮೀಟರ್ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕೆ.ವಿ ಪ್ರಶಾಂತ್, ಗುಡ್ಡೆ ಮನೆ ಶಶಿ ಬೋಪಯ್ಯ, ಗುಡ್ಡೆಮನೆ ಮಾದಪ್ಪ, ಬಾಕಿಲನ ದಯಾನಂದ, ಚೀಯಪ್ಪನ ಚೇತನ್, ಮೆಡತನ ಅಪ್ಪಯ್ಯ, ಗುಡ್ಡ ಮನೆ ವಸಂತ್ ಕುಮಾರ್, ಗುಡ್ಡೆಮನೆ ಚಂದ್ರಶೇಖರ್, ಬಾಕಿಲನ ರಘು, ಬಾಕಿಲನ ನಾಗೇಶ್ ಮುದ್ದಯ್ಯ, ಚೀಯಪ್ಪನ ಚಂದ್ರಶೇಖರ್ ಬಹುಮಾನಗಳನ್ನು ಪ್ರಾಯೋಜಿಸಿದ್ದರು. ಭಾನುವಾರ ಮೇಡತನ, ಕುಂದನ ಮತ್ತು ಜಬ್ಬಣ ಹಾಗೂ ಗುಡ್ಡೆಮನೆ ತಂಡಗಳ ನಡುವೆ ಅಂತಿಮ ಹಗ್ಗ ಜಗ್ಗಾಟ ಸ್ಪರ್ಧೆ ನಡೆದು ಮೇಡತನ, ಕುಂದನ ಮತ್ತು ಜಬ್ಬನ ತಂಡದ ಆಟಗಾರರು ಗೆಲುವು ಸಾಧಿಸಿದರು.
ಬಲಮುರಿ ಗ್ರಾಮದ ಕುಂಜಿಕಟ್ಟು ಮೈದಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮವನ್ನು ಪ್ರಾಣಿಶಾಸ್ತ್ರದ ವಿಜ್ಞಾನಿ ಗುಡ್ಡ ಮನೆ ಚಿಣ್ಣಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇವನೂರು ಗೌಡ ಒಕ್ಕೂಟ ಕಳೆದ 24 ವರ್ಷಗಳಿಂದ ಜನಾಂಗ ಬಾಂಧವರಿಗಾಗಿ ವಿವಿಧ ಕ್ರಾಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ವರ್ಷ ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ದೇವನೂರು ಗೌಡ ಒಕ್ಕೂಟದ ಅಧ್ಯಕ್ಷ ಪೊನ್ನಚ್ಚನ ಎಂ.ಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬೆಳ್ಳಿಹಬ್ಬ ಸವಿ ನೆನಪಿನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಗೌಡ ಒಕ್ಕೂಟದ ಗೌರವ ಕಾರ್ಯದರ್ಶಿ ಬಾಕಿಲನ ಎ.ರಾಜ ಹಾಗೂ ಗುಡ್ಡೆ ಮನೆ ಚಿಣ್ಣಯ್ಯ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು. ಮೇಡತನ ಅಪ್ಪಯ್ಯ, ಬಾಕಿಲನ ಪೂಣಚ್ಚ, ಗುಡ್ಡೆ ಮನೆ ರಾಮಣ್ಣ, ಚೀಯಪ್ಪನ ಡಿ. ಮಾದಪ್ಪ, ಅಚ್ಚಾಂಡಿರ ಪ್ರಸಾದ್, ಬಾಕಿಲನ ಪ್ರೇಮ್ ಕುಮಾರ್ ಉಪ ಸ್ಥಿತರಿದ್ದರು.
ಮೇಡತನ ರಶ್ಮಿ ಪ್ರಾರ್ಥಿಸಿದರು. ಮಾಜಿ ಅಧ್ಯಕ್ಷ ಕುಂದನ ಪ್ರಭಾನಂದ ಸ್ವಾಗತಿಸಿದರು. ಜಿ.ಬಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಗುಡ್ಡೆಮನೆ, ಬಾಕಿಲನ, ಚೀಯಪನ, ಮೆಡತನ ಪೊನ್ನಚ್ಚನ, ಕುಂದನ, ಜಬ್ಬನ- ಈ ಏಳು ಕುಟುಂಬಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗೌಡ ಸಂಪ್ರದಾಯ ಬಿಂಬಿಸುವ ಕಾರ್ಯಕ್ರಮವನ್ನು ಗುಡ್ಡೆ ಚಂದ್ರಶೇಖರ್ ಹಾಗೂ ಜಿ.ಬಿ.ರಮೇಶ್ ಯೋಗ ಪ್ರದರ್ಶನವನ್ನು ನಡೆಸಿಕೊಟ್ಟರು. ಬಳಿಕ ಗೌಡ ಸಂಸ್ಕೃತಿಯನ್ನು ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.