ಮಡಿಕೇರಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ಹಯ್ಯಲಾಲ್ ಅವರ ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಬಿಜೆಪಿ, ಹಿಂದೂ ಜಾಗರಣಾ ವೇದಿಕಯ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಸುರಿಯುತ್ತಿದ್ದ ಮಳೆಯಲ್ಲೇ ಕೊಡೆಗಳನ್ನು ಹಿಡಿದುಕೊಂಡು ಜನರಲ್ ತಿಮ್ಮಯ್ಯ ವೃತ್ತದ ಬಳಿ ಸೇರಿದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿದರು.
ದಾರಿಯುದ್ದಕ್ಕೂ ಜಿಹಾದಿಗಳಿಗೆ ದಿಕ್ಕಾರ, ಭಯೋತ್ಪಾದಕರಿಗೆ ದಿಕ್ಕಾರ ಮೊದಲಾದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೀವನ ನಿರ್ವಹಣೆಗಾಗಿ ಅಂಗಡಿಯ ಬಾಗಿಲು ತೆರೆದ ಕನ್ಹಯ್ಯಲಾಲ್ ಅವರನ್ನು ಶಿರಚ್ಛೇದ ಮಾಡಿ, ಪ್ರಧಾನಿಯವರಿಗೆ ಬೆದರಿಕೆ ಹಾಕುವ ಇಂತಹವರನ್ನು ಬಿಡಬಾರದು ಎಂದು ಒತ್ತಾಯಿಸಿದರು.
‘ಜಾತ್ಯಾತೀತವಾದಿಗಳು ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದ ಕಾರ್ಯಕರ್ತರು, ‘ಈ ಪರಿಯಲ್ಲಿ ಬರ್ಬರವಾಗಿ ಹತ್ಯೆಯಾದರೂ ಜಾತ್ಯಾತೀತವಾದಿಗಳು, ಪ್ರಗತಿಪರರು ದನಿ ಎತ್ತುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.