ಶನಿವಾರಸಂತೆ (ಕೊಡಗು ಜಿಲ್ಲೆ): ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾನುವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶುಭಾಶಯ ಪತ್ರಗಳನ್ನು ಬರೆದು ತಮ್ಮ ಪ್ರೀತಿಯ ಶಿಕ್ಷಕರಿಗೆ ಕಳುಹಿಸಿ ಗುರುಭಕ್ತಿ ಮೆರೆದರು.
ಕೋವಿಡ್ ಸಾಂಕ್ರಾಮಿಕ ಪಿಡುಗಿನಿಂದ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಕೊಡಗಿನಲ್ಲಿ ಇನ್ನೂ ನಿರ್ಬಂಧಗಳು ಮುಂದುವರಿದಿದೆ. ವಾರಾಂತ್ಯ ಕರ್ಫ್ಯೂ ಇದೆ. ಹೀಗಾಗಿ, ಆನ್ಲೈನ್ ತರಗತಿಗಳು ನಡೆಯುತ್ತಿವೆ.
ಈ ನಡುವೆ ಶಿಕ್ಷಕರ ಮುಖಾಮುಖಿ ಭೇಟಿಯ ಅವಕಾಶದಿಂದ ವಂಚಿತರಾಗಿರುವ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಸೃಜನಾತ್ಮಕವಾಗಿ ಪತ್ರ ಬರೆದು ಶಿಕ್ಷಕರ ಭೋಧನ ಶೈಲಿ, ಅವರು ತೋರುವ ಅಕ್ಕರೆ, ಪ್ರೀತಿಯನ್ನು ಸ್ಮರಿಸಿಕೊಂಡರು.
‘ಶಾಲೆಗಳು ನಡೆಯದೇ ನಮಗೆ ತುಂಬ ಬೇಸರವಾಗಿದೆ. ಯಾವಾಗ ಆರಂಭವಾಗುತ್ತದೆಯೋ ಎಂದು ಕಾಯುತ್ತಿದ್ದೇವೆ’ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.