ಮಡಿಕೇರಿ: ‘ರಾಜ್ಯದಲ್ಲಿ ಈ ವರ್ಷ ಮೋಡ ಬಿತ್ತನೆ ಯೋಜನೆ ಕೈಬಿಡಲಾಗಿದೆ’ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸರೆಡ್ಡಿ ಇಲ್ಲಿ ಶನಿವಾರ ತಿಳಿಸಿದರು.
‘ಕೊಡಗು ಜಿಲ್ಲೆಯಲ್ಲಿ 2018 ಹಾಗೂ 2019ರಲ್ಲೂ ಮೋಡ ಬಿತ್ತನೆ ಮಾಡಿಲ್ಲ. ಈ ಬಗ್ಗೆ ಜನರಿಗೆ ಯಾವುದೇ ಸಂಶಯ ಬೇಡ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಜಿಲ್ಲೆಗಳಲ್ಲಿ ಮಾತ್ರ ಕಳೆದ ವರ್ಷ ಮೋಡ ಬಿತ್ತನೆ ಮಾಡಲಾಗಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷರೂ ಆದ, ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು, ‘ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಯಲ್ಲಿ ಭೂಕುಸಿತಕ್ಕೆ ಸಂಬಂಧಪಟ್ಟಂತೆ ಅಧ್ಯಯನ ನಡೆಸಲಾಗುತ್ತಿದೆ. ಇನ್ನೂ ಮೂರು ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ವರದಿಯಲ್ಲಿ ಕೆಲವೊಂದು ಶಿಫಾರಸು ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.
2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದ ಜೋಡುಪಾಲ, ಮದೆ, 2ನೇ ಮೊಣ್ಣಂಗೇರಿ, ಕರ್ಣಂಗೇರಿ, ಹಟ್ಟಿಹೊಳೆ, ಹಾಲೇರಿ ಭಾಗಕ್ಕೆ ಅಧ್ಯಯನ ಸಮಿತಿ ಸದಸ್ಯರು ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.