ಗೋಣಿಕೊಪ್ಪಲು (ಕೊಡಗು ಜಿಲ್ಲೆ): ಇಲ್ಲಿಗೆ ಸಮೀಪದ ನಿಟ್ಟೂರು ಜಾಗಲೆಯಲ್ಲಿ ಶುಕ್ರವಾರ ಅರಣ್ಯ ಇಲಾಖೆ ಸಿಬ್ಬಂದಿ 11 ವರ್ಷ ವಯಸ್ಸಿನ ಹೆಣ್ಣು ಹುಲಿಯನ್ನು ಸೆರೆ ಹಿಡಿದಿದ್ದಾರೆ. ಇಲ್ಲಿ ಗುರುವಾರವಷ್ಟೇ ಹುಲಿ ದಾಳಿಯಿಂದ ದನಗಾಹಿಯೊಬ್ಬರು ಮೃತಪಟ್ಟಿದ್ದರು. ಅವರ ಶವ ದೊರೆತ ಸ್ಥಳದಿಂದ 200 ಮೀಟರ್ ದೂರದಲ್ಲಿ ಕಾಫಿತೋಟದ ನೆರಳಿನಲ್ಲಿ ಹುಲಿಯು ವಿರಮಿಸಿತ್ತು.
ಕಾರ್ಯಾಚರಣೆ ಕೈಗೊಂಡ ಸುಮಾರು 100ಕ್ಕೂ ಅಧಿಕ ಸಿಬ್ಬಂದಿ, ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದರು.
‘ಹುಲಿಯು ಏನನ್ನೂ ಸೇವಿಸದೇ ಬಳಲಿದಂತೆ ಕಂಡು ಬಂದಿದೆ. ಕಾರಣ ತಿಳಿಯುತ್ತಿಲ್ಲ. ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
ಮಡಿಕೇರಿ ಸಿಸಿಫ್ ಮನೋಜ್ ಕುಮಾರ್ ತ್ರಿಪಾಠಿ, ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದ ನಿರ್ದೇಶಕ ಹರ್ಷಕುಮಾರ್, ಡಿಸಿಎಫ್, ಜಗನ್ನಾಥ್, ತಿತಿಮತಿ ಎಸಿಎಫ್ ಗೋಪಾಲ್, ವಿರಾಜಪೇಟೆ ಎಸಿಎಫ್ ನೆಹರು, ಅನುಷಾ, ಆರ್ಫ್ಒ ಗಂಗಾಧರ ಕಾರ್ಯಾಚರಣೆ ತಂಡದಲ್ಲಿದ್ದರು.