ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲೂ ಅನ್‌ಲಾಕ್‌: ಮೊದಲ ದಿನವೇ ಜನರ ಉತ್ಸಾಹ

Last Updated 9 ಜುಲೈ 2021, 13:27 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಅನ್‌ಲಾಕ್‌ ಆಗಿದ್ದು, ಮೊದಲ ದಿನವಾದ ಶುಕ್ರವಾರವೇ ಖರೀದಿಯ ಧಾವಂತ ಕಂಡುಬಂತು.

ಜಿಲ್ಲೆಯ ಎಲ್ಲ ನಗರ ಹಾಗೂ ಪಟ್ಟಣಗಳಲ್ಲಿ ಸಂಜೆಯ ತನಕವೂ ಜನದಟ್ಟಣೆ ಕಂಡುಬಂತು. ಮಡಿಕೇರಿಯಲ್ಲಿ ಶುಕ್ರವಾರ ಸಂತೆಯ ದಿನವಾದ ಕಾರಣಕ್ಕೆ, ಹೆಚ್ಚಿನ ಜನರು ಕಂಡುಬಂದರು. ಜಿಲ್ಲೆಯ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವ ಲಕ್ಷಣ ಕಾಣಿಸಿತು.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈ 19ರ ಬೆಳಿಗ್ಗೆ 6 ಗಂಟೆಯ ತನಕ ಅನ್‌ಲಾಕ್‌ ನಿಯಮ ಜಾರಿಗೊಳಿಸಿ, ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಕಂಟೈನ್‌ಮೆಂಟ್ ವಲಯದಲ್ಲಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ.

ಚಿತ್ರಮಂದಿರ ಮತ್ತು ಪಬ್‌ಗಳಿಗೆ ಅವಕಾಶ ಇಲ್ಲ. ಈಜುಕೊಳಗಳಲ್ಲಿ ಸ್ಪರ್ಧಾತ್ಮಕ ಉದ್ದೇಶದ ತರಬೇತಿಗೆ ಮಾತ್ರ ಅವಕಾಶ ಇರುತ್ತದೆ. ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ತರಬೇತಿ ಉದ್ದೇಶಕ್ಕಾಗಿ ಮಾತ್ರ ಸ್ಪೋಟ್ಸ್‌ ಕಾಂಪ್ಲೆಕ್ಸ್ ಮತ್ತು ಸ್ಟೇಡಿಯಂಗಳನ್ನು ತೆರೆಯಬಹುದಾಗಿದೆ. ಪ್ರೇಕ್ಷಕರಿಗೆ ಅವಕಾಶ ಇರುವುದಿಲ್ಲ. ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಗುಂಪುಗೂಡುವಿಕೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡುವಿಕೆ ಮಾಡುವಂತಿಲ್ಲ.

ಗರಿಷ್ಠ 100 ಮಂದಿ ಮೀರದಂತೆ ಮದುವೆ, ಕೌಟುಂಬಿಕ ಸಮಾರಂಭಗಳನ್ನು ನಡೆಸಬಹುದಾಗಿದೆ. ಗರಿಷ್ಠ 20 ಮಂದಿ ಮೀರದಂತೆ ಅಂತ್ಯಕ್ರಿಯೆ, ಶವಸಂಸ್ಕಾರ ನಡೆಸಬಹುದು. ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಇರುತ್ತದೆ. ಸೇವೆಗಳಿಗೆ ಅವಕಾಶ ಇರುವುದಿಲ್ಲ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿ ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಎಲ್ಲ ಅಂಗಡಿ, ರೆಸ್ಟೋರೆಂಟ್, ಮಾಲ್, ಖಾಸಗಿ ಕಚೇರಿಗಳು ಮುಂತಾದವುಗಳು ಕೋವಿಡ್ – 19 ನಿಯಮ ಪಾಲಿಸಿ ನಡೆಸಬಹುದಾಗಿದೆ. ಎಲ್ಲ ಶೈಕ್ಷಣಿಕ ಸಂಸ್ಥೆಗಳು, ಕಾಲೇಜುಗಳು ಸರ್ಕಾರದ ಮುಂದಿನ ಆದೇಶದವರೆಗೆ ಮುಚ್ಚಬೇಕು, ಪ್ರತಿದಿನ ರಾತ್ರಿ 9ರಿಂದ ಮರುದಿನ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ತುರ್ತು, ವೈದ್ಯಕೀಯ, ಸರಕು ಸಾಗಾಣಿಕೆ, ಅತ್ಯವಶ್ಯಕ ಸೇವೆಗಳನ್ನು ಹೊರತುಪಡಿಸಿ, ಉಳಿದಂತೆ ಯಾವುದೇ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಸಾರ್ವಜನಿಕರು ವಿನಾಕಾರಣ ತಿರುಗಾಡುವುದನ್ನು ನಿಷೇಧಿಸಿದೆ.

ಕರ್ತವ್ಯದ ನಿಮಿತ್ತ ಸಂಚರಿಸುವವರು ಆಯಾ ಇಲಾಖೆ, ಸಂಸ್ಥೆ, ಕಚೇರಿಯಿಂದ ನೀಡಿದ ಅಧಿಕೃತ ಗುರುತಿನ ಚೀಟಿ ಹೊಂದಿರಬೇಕು. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಸ್‌ಗಳ ಸಂಚಾರ ಇರುತ್ತದೆ. ವಿಮಾನ ನಿಲ್ದಾಣ, ರೈಲ್ವೆ, ಬಸ್ ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆತರಲು ಹಾಗೂ ಕರೆದೊಯ್ಯಲು ಅವಕಾಶ ಇರುತ್ತದೆ. ಆದರೆ, ಸಂಚಾರದ ವೇಳೆ ಅಧಿಕೃತ ದಾಖಲೆ, ಟಿಕೆಟ್ ಇರಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT