ಕುಶಾಲನಗರ: ‘ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ವ್ಯಾಪ್ತಿಯ ರೈತರ ಅನುಕೂಲಕ್ಕಾಗಿ ₹ 1.10 ಕೋಟಿ ವೆಚ್ಚದಲ್ಲಿ ಗೋದಾಮು ಹಾಗೂ ಕಣ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ’ ಎಂದು ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ಹೇಳಿದರು.
ಸಮೀಪದ ಕೂಡುಮಂಗಳೂರು ರಾಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕೂಡುಮಂಗಳೂರು ರಾಮೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸೀಗೆಹೊಸೂರು ಗ್ರಾಮದಲ್ಲಿ 2 ಎಕರೆ ಜಾಗ ಖರೀದಿಸಲಾಗಿದ್ದು, ಈ ಸ್ಥಳದಲ್ಲಿ ರೈತರ ಅನುಕೂಲಕ್ಕಾಗಿ ಸುಸಜ್ಜಿತವಾದ ಗೋದಾಮು ಹಾಗೂ ಕೃಷಿ ಕಣ ನಿರ್ಮಿಸಲಾಗುವುದು’ ಎಂದು ಹೇಳಿದರು.
‘ಸಂಘವು ರೈತರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಸದಸ್ಯರಿಗೆ ವಿವಿಧ ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಏಳಿಗೆಗೆ ಶ್ರಮಿಸುತಿದೆ. ಉತ್ತಮ ವಹಿವಾಟು ನಡೆಸಿ ಕಳೆದ ಸಾಲಿನಲ್ಲಿ ಸಂಘವು ₹ 22.96 ಲಕ್ಷ ನಿವ್ವಳ ಲಾಭಗಳಿಸಿದೆ’ ಎಂದರು.
‘ಗೋದಾಮು, ಕಣ ನಿರ್ಮಾಣಕ್ಕೆ ಈಗಾಗಲೇ ಇದರ ನೀಲನಕ್ಷೆ ಸಿದ್ಧಪಡಿಸಿ ನಬಾರ್ಡ್ಗೆ ಕಳುಹಿಸಲಾಗಿದೆ. ನಬಾರ್ಡ್ ವತಿಯಿಂದ ಅನುದಾನ ಬಿಡುಗಡೆ ಆದ ಬಳಿಕ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಜೊತೆಗೆ ಈಗಿರುವ ಸಹಕಾರ ಭವನವನ್ನು ಅಭಿವೃದ್ಧಿಪಡಿಸಲಾಗುವುದು.
ಬೆಳೆ ಪರಿಹಾರ ನಿಧಿ ಯೋಜನೆಯಡಿ ಬೆಳೆ ಸಾಲ ಪಡೆದು ಅರ್ಥಿಕ ನಷ್ಟ ಉಂಟಾದ ಸದಸ್ಯರಿಗೆ ನೆರವು ನೀಡುವ ಉದ್ದೇಶದಿಂದ ಬೈಲಾ ತಿದ್ದುಪಡಿ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಮಧ್ಯಮಾವಧಿ, ಅಲ್ಪಾವಧಿ, ದೀರ್ಘಾವಧಿ ಮತ್ತು ಜಾಮೀನಿನ ಮೇಲೆ ನೀಡುವ ಸಾಲದ ಮಿತಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಸಂಘದ ಅಭಿವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ರೈತ ಸದಸ್ಯರು ಕೃಷಿ ಸಾಲದ ಬಗ್ಗೆ, ಜಾಮೀನು ಸಾಲದ ಬಗ್ಗೆ ಗೊಬ್ಬರ ಮತ್ತು ವ್ಯಾಪಾರ ಅಭಿವೃದ್ಧಿ ಸಾಲದ ಬಗ್ಗೆ ವಿವಿಧ ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಪಿ.ಹಮೀದ್, ನಿರ್ದೇಶಕರಾದ ಕೆ.ಕೆ.ಬೋಗಪ್ಪ, ತಮ್ಮಣ್ಣೇಗೌಡ, ಕೆ.ಟಿ. ಅರುಣ್ ಕುಮಾರ, ಎಸ್. ಎನ್. ರಾಜಾರಾವ್, ಟಿ.ಕೆ.ವಿಶ್ವನಾಥ, ಎಚ್.ಆರ್.ಪಾರ್ವತಮ್ಮ, ಕೆ.ಎನ್. ಲಕ್ಷಣರಾಜೇ ಅರಸ್, ಕೃಷ್ಣೇಗೌಡ, ವಿ.ಬಸಪ್ಪ, ರಮೇಶ , ಕೆ.ಕೆ.ಪವಿತ್ರಾ, ಕುಶಾಲನಗರ ಡಿ.ಸಿ.ಸಿ ಬ್ಯಾಂಕ್ ವ್ಯವಸ್ಥಾಪಕ ತುಂಗರಾಜು, ಸಂಘದ ಮೇಲ್ವಿಚಾರಕ ಎನ್.ಕೆ.ಅಜೀವ್, ನವೀನ್ ಕುಮಾರ್, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಪಿ.ಮೀನಾ, ಲೆಕ್ಕಾಧಿಕಾರಿ ಟಿ.ಪಿ.ಸೋಮಶೇಖರ ಉಪಸ್ಥಿತರಿದ್ದರು.
ಇದೇ ಸಂದರ್ಭ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಬಹುಮಾನ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.