ಮಡಿಕೇರಿ: ತಾಲ್ಲೂಕಿನ ಅರೆಕಾಡು ಸಮೀಪದ ಮದರಕುಪ್ಪೆಯಲ್ಲಿ ಕಾಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆ ಹಿಡಿದಿದ್ದಾರೆ.
‘ಅಂದಾಜು 18ರಿಂದ 20 ವರ್ಷ ವಯಸ್ಸಿನ ಈ ಗಂಡಾನೆಯು ಈ ಭಾಗದ ಜನರಿಗೆ ಹೆಚ್ಚಿನ ಉಪಟಳ ನೀಡಿತ್ತು. ಇದನ್ನು ಸಾಕಾನೆಗಳ ನೆರವಿನಿಂದ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ’ ಎಂದು ಆನೆ ಕಾರ್ಯಪಡೆಯ ಡಿಸಿಎಫ್ ಪೂವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಭಾನುವಾರಷ್ಟೇ ಅರೆಕಾಡು ವ್ಯಾಪ್ತಿಯಲ್ಲಿ ಕಾಡಾನೆಯ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಆನೆ ಎಲ್ಲೆಂದರಲ್ಲಿ ಅಲೆಯುತ್ತ ಭೀತಿ ಸೃಷ್ಟಿಸಿತ್ತು. ಸೋಮವಾರ ಈ ಕಾರಣಕ್ಕಾಗಿ ಇಲ್ಲಿನ 8 ಗ್ರಾಮಗಳ ಶಾಲೆಗಳಿಗೆ ರಜೆ ನೀಡಲಾಗಿತ್ತು. ಆನೆ ಸೆರೆಗೆ ಸುಮಾರು 150 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.