ಮಡಿಕೇರಿ: ಇಲ್ಲಿನ ದುಬಾರೆಯ ಕಾಡಿನೊಳಗೆ ಗಂಡಾನೆಯೊಂದರ ಕಳೇಬರ ಶನಿವಾರ ಪತ್ತೆಯಾಗಿದೆ. ಸುಮಾರು 15 ದಿನಗಳಿಗೂ ಹಿಂದೆ ಮೃತಪಟ್ಟಿರುವ ಈ ಕಾಡಾನೆಯ ದೇಹ ಸಂಪೂರ್ಣ ಕೊಳೆತು ಹೋಗಿದೆ.
ಈ ಕುರಿತು ‘ಪ್ರಜಾವಾಣಿ’ ಡಿಸಿಎಫ್ ಭಾಸ್ಕರ್ ಅವರನ್ನು ಸಂಪರ್ಕಿಸಿದಾಗ ಅವರು, ‘ಆನೆಯ ಎರಡೂ ದಂತಗಳು ಸಿಕ್ಕಿವೆ. ಕಾಲಿಗೆ ಗಾಯವಾಗಿ ಕುಂಟುತ್ತಾ ಹೋಗುತ್ತಿದ್ದ ಆನೆಯೊಂದನ್ನು ಇತ್ತೀಚೆಗೆ ಸಿಬ್ಬಂದಿಯೊಬ್ಬರು ಪತ್ತೆ ಹಚ್ಚಿದ್ದರು. ಬಹುಶಃ ಅದೇ ಆನೆ ಇರಬಹುದು ಎಂದು ಅಂದಾಜು ಮಾಡಲಾಗಿದೆ’ ಎಂದು ತಿಳಿಸಿದರು.
ಆನೆಕಾಡಿಗೆ ಕುರುಡು ಆನೆ ಮೃತದೇಹ
ಶುಕ್ರವಾರ ರಾತ್ರಿ ಮೃತಪಟ್ಟಿದ್ದ ಕಣ್ಣು ಕಾಣದೇ ಅಲೆಯುತ್ತಿದ್ದ ಹೆಣ್ಣಾನೆಯ ಮೃತದೇಹವನ್ನು ಕುಶಾಲನಗರ ಸಮೀಪದ ಆನೆಕಾಡಿಗೆ ತರಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಗರ್ಭಿಣಿ ಅಲ್ಲ ಎಂದು ಖಚಿತಗೊಂಡಿತು. ಇದಕ್ಕೂ ಮುನ್ನ ಇದನ್ನು ಪರೀಕ್ಷಿಸಿದ ವೈದ್ಯರು ಗರ್ಭಿಣಿಯಾಗಿರಬಹುದು ಎಂದು ಸಂದೇಹ ವ್ಯಕ್ತಪಡಿಸಿದ್ದರು.
ಹಾರಂಗಿ ಹಿನ್ನೀರಿನಲ್ಲಿ ಶುಕ್ರವಾರಷ್ಟೇ ಮೃತಪಟ್ಟಿದ್ದ ಕಾಡಾನೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಲು ಕುಶಾಲನಗರ ಸಮೀಪದ ಆನೆಕಾಡಿಗೆ ಶನಿವಾರ ತರಲಾಯಿತು