ಕೋಲಾರ: ‘ಕೋವಿಡ್ನಿಂದ ಮಕ್ಕಳ ಕಲಿಕೆಯಲ್ಲಿ ಆಗಿರುವ ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಮುನ್ನಡೆಸಿ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು ಪ್ರಥಮ ಸ್ಥಾನ ಪಡೆಯಲು ಬದ್ಧತೆಯಿಂದ ಕೆಲಸ ಮಾಡಿ’ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಶಿಕ್ಷಕರಿಗೆ ಕಿವಿಮಾತು ಹೇಳಿದರು.
2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದ ಪ್ರಗತಿಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕೋಲಾರ ಪರಿವಾರ ಅಧಿವೇಶನ’ ಹಾಗೂ ‘ಸ್ಫೂರ್ತಿ ಪ್ರೇರಣಾ’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಕೋವಿಡ್ನಿಂದ 2 ವರ್ಷಗಳ ಕಾಲ ಮಕ್ಕಳು ಭೌತಿಕ ತರಗತಿಗಳಿಂದ ದೂರವಾಗಿದ್ದಾರೆ. ಇದೀಗ ಶಾಲೆಯತ್ತ ಬಂದಿರುವ ಮಕ್ಕಳನ್ನು ಸೇತುಬಂಧ ಮೂಲಕ ಕಲಿಕೆಯ ರಹದಾರಿಗೆ ಕರೆತರುವ ಕೆಲಸವಾಗಿದೆ. ಇದರ ಜತೆಗೆ ನಿರಂತರ, ಮನ್ವಂತರ, ಚಿರಂತರ, ತನ್ಮಯ, ವಿಸ್ಮಯ, ಸಮನ್ವಯ ಧ್ಯೇಯಗಳೊಂದಿಗೆ ಮಕ್ಕಳಿಗೆ ಸ್ಫೂರ್ತಿ, ಪ್ರೇರಣೆಯಾಗಲು ವಿಷಯವಾರು ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ’ ಎಂದರು.
‘ಕಲಿಕೆಯಲ್ಲಿ ಎದುರಾಗುವ ಸಮಸ್ಯೆಗಳನ್ನೇ ಸವಾಲಾಗಿ ಸ್ವೀಕರಿಸಿ. ಮಕ್ಕಳು ಕಲಿಕೆಯ ಹಾದಿಗೆ ಸಾಗಿ ಬರಲು ಶಿಕ್ಷಕರ ಪ್ರಯತ್ನ ಅತಿ ಮುಖ್ಯ. ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ 20 ಸಾವಿರಕ್ಕೂ ಹೆಚ್ಚಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ’ ಎಂದು ಸಲಹೆ ನೀಡಿದರು.
‘ಕೋವಿಡ್ ಆತಂಕದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ದೇಶಕ್ಕೆ ಮಾದರಿಯಾಗಿದ್ದೇವೆ. ದೇಶಕ್ಕೆ, ಸಮಾಜಕ್ಕೆ ಮಾನವ ಸಂಪನ್ಮೂಲ ನೀಡುವ ಸಾರ್ವಜನಿಕ ಶಿಕ್ಷಣ ಇಲಾಖೆ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಶಿಕ್ಷಕರ ಜತೆಗೆ ಕಚೇರಿಯನ್ನು ಇತರೆ ಎಲ್ಲಾ ಇಲಾಖೆಗಳಿಗೂ ಮಾದರಿಯಂತೆ ಸನ್ನದ್ಧಗೊಳಿಸಬೇಕು’ ಎಂದು ಹೇಳಿದರು.
ಅನುಭವ ಮಂಟಪ: ‘ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರಿಗೆ ವಿಷಯವಾರು ಸಂಪನ್ಮೂಲ ವ್ಯಕ್ತಿಗಳಿಂದ ನಡೆಸುತ್ತಿರುವ ತರಬೇತಿ, ಸಂವಾದವು ಕೋವಿಡ್ನಿಂದ ಕುಂಠಿತಗೊಂಡಿರುವ ಕಲಿಕಾ ಕಾರ್ಯದಲ್ಲಿ ಮತ್ತೆ ಕ್ರಿಯಾಶೀಲತೆ ಮೂಡಿಸುವ ಅನುಭವ ಮಂಟಪವಾಗಲಿದೆ. ಮಕ್ಕಳಿಗೆ ಪಠ್ಯದ ಜತೆಗೆ ಬದುಕು ಕಲಿಸಿ. ಜೀವನ, ವ್ಯವಹಾರ ಜ್ಞಾನವು ಅಂಕ ಗಳಿಕೆ ಜತೆಜತೆಗೆ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
‘ಮಾತೃಭಾಷೆ ಜತೆಗೆ ಇಂದು ಆಂಗ್ಲ ಮಾಧ್ಯಮ, ಕಂಪ್ಯೂಟರ್ ಶಿಕ್ಷಣ ಜೀವನಾಧಾರ ಕೌಶಲವಾಗಿದೆ. ಈ ವರ್ಷದಿಂದ 45 ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಜಿಲ್ಲೆಯ 2,632 ಶಾಲೆಗಳಲ್ಲಿ ಸುಮಾರು 2 ಲಕ್ಷ ಮಕ್ಕಳು ಓದುತ್ತಿದ್ದು, ಇವರ ಭವಿಷ್ಯ 4 ಸಾವಿರ ಶಿಕ್ಷಕರ ಕೈಯಲ್ಲಿದೆ’ ಎಂದರು.
ಜ್ಞಾನ ಹೆಚ್ಚಿಸಿ: ‘ಮಕ್ಕಳಲ್ಲಿ ಓದು ಬರವಣಿಗೆ ಜ್ಞಾನ ಹೆಚ್ಚಿಸಿ. ಭಾಷಾ ವಿಷಯಗಳಲ್ಲಿ ಪ್ರಾವಿಣ್ಯತೆ ಬಂದರೆ ಐಚ್ಛಿಕ ವಿಷಯಗಳ ಕಲಿಕೆ ಸುಲಭ. ಗುಣಮಟ್ಟದ ಫಲಿತಾಂಶದತ್ತ ಗುರಿ ಇರಲಿ. ಈ ಬಾರಿ ಎಸ್ಸೆಸ್ಸೆಲ್ಸಿಯ 3,800 ಮಕ್ಕಳು ವಿವಿಧ ವಿಷಯಗಳಲ್ಲಿ ಶೇ 100ರ ಸಾಧನೆ ಮಾಡಿದ್ದಾರೆ’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ವಿವರಿಸಿದರು.
‘ಅಧ್ಯಾಯವಾರು ಪ್ರಶ್ನೋತ್ತರ ಮಾಲಿಕೆ ಸಿದ್ಧಪಡಿಸಲಾಗಿದೆ. ಮಕ್ಕಳಿಗೆ ರೂಪಣಾತ್ಮಕ ಚಟುವಟಿಕೆ ಕುರಿತ ಮಾಹಿತಿ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನಮಾನ ಕಾಪಾಡುವ ಬದ್ಧತೆ ಶಿಕ್ಷಕರಲ್ಲಿ ಬರಲಿ. ತರಬೇತಿಯ ಪ್ರಯೋಜನ ಪಡೆದುಕೊಳ್ಳಿ’ ಎಂದು ತಿಳಿಸಿದರು.
ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ವಿಷಯ ಪರಿವೀಕ್ಷಕರಾದ ಗಾಯತ್ರಿ, ಶಶಿವಧನ, ಕೃಷ್ಣಪ್ಪ, ಸಿರಾಜುದ್ದೀನ್, ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.