ಕೋಲಾರ: ‘ಮಕ್ಕಳ ಆರೋಗ್ಯದ ದೃಷ್ಟಿಯಿಂದ 1ರಿಂದ 19ವರ್ಷದೊಳಗಿನ ಮಕ್ಕಳಿಗೆ ಫೆ.10ರಂದು ಜಂತುಹುಳು ನಿವಾರಣಾ ‘ಅಲ್ಬೆಂಡ್ಜೋಲ್’ ಮಾತ್ರೆ ವಿತರಿಸಲಾಗುವುದು’ ಎಂದು ಎಂದು ನರಸಾಪುರ ವೈದ್ಯಾಧಿಕಾರಿ ಡಾ.ಗೀತಾ ತಿಳಿಸಿದರು.
ತಾಲ್ಲೂಕಿನ ನರಸಾಪುರ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಶಿಕ್ಷಕರಿಗೆ ಜಂತುಹುಳು ಮಾತ್ರೆ ವಿತರಿಸಿ ಮಾತನಾಡಿ, ‘ಜಂತುಹುಳು ನಿವಾರಣೆ ದಿನಾಚರಣೆ ಅಂಗವಾಗಿ ಮಾತ್ರೆ ವಿತರಿಸಲಾಗುತ್ತಿದೆ. ಮಾತ್ರೆ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ ಯಾವುದೇ ರೀತಿ ಅಡ್ಡ ಪರಿಣಾಮ ಬೀರುವುದಿಲ್ಲ’ ಎಂದರು.
‘1ರಿಂದ 2 ವರ್ಷದೊಳಗಿನ ಮಕ್ಕಳಿಗೆ ಅರ್ಧ ಮಾತ್ರೆ ಹಾಗೂ 2ರಿಂದ 19 ವರ್ಷದೊಳಗಿನ ಮಕ್ಕಳಿಗೆ ಒಂದು ಮಾತ್ರೆಯನ್ನು ನೀಡಲಾಗುವುದು. ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರ ಹಾಗೂ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಾತ್ರೆಗಳನ್ನು ವಿತರಿಸಲಾಗುತ್ತಿದ್ದು, ಇದರ ಪ್ರಯೋಜನೆ ಮಕ್ಕಳಿಗೆ ಕಲ್ಪಿಸಬೇಕು’ ಎಂದು ಸಲಹೆ ನೀಡಿದರು.
‘ಜಂತುಹುಳು ನಿವಾರಣೆ ಔಷಧ ಸೇವಿಸುವುದರಿಂದ ಆರೋಗ್ಯ ಸುಧಾರಣೆ, ಅಪೌಷ್ಟಿಕತೆ ನಿವಾರಣೆ ಹಾಗೂ ಬೌದ್ಧಿಕ ಬೆಳವಣಿಗೆಯಾಗಲಿದೆ. ಬರಿಗಣ್ಣಿಗೆ ಕಾಣಿಸದ ಜಂತುಹುಳುಗಳ ಮಕ್ಕಳ ಬೆಳವಣಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ಮಾತ್ರೆಯನ್ನು ಮಕ್ಕಳಿಗೆ ಶಾಲೆಯಲ್ಲಿ ವಿತರಿಸಲಾಗುತ್ತಿದೆ’ ಎಂದು ಹೇಳಿದರು.
‘ಮಕ್ಕಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಪರಿಸರಸದಲ್ಲಿ ಬೆಳೆಸುವುದರಿಂದ ಜಂತು ಹುಳುವಿನಿಂದ ಮುಕ್ತಿ ಪಡೆಯಲು ಸಾಧ್ಯ. ಜಂತುಹುಳುಗಳಿಂದಾಗಿ ಮಕ್ಕಳಲ್ಲಿ ರಕ್ತಹೀನತೆ, ಹಸಿವು ಆಗದಿರುವುದು. ನಿಶ್ಯಕ್ತಿ, ಆತಂಕ, ವಾಕರಿಕೆ ಮತ್ತಿತರ ಸಮಸ್ಯೆಗಳು ಕಂಡು ಬರುತ್ತವೆ’ ಎಂದು ತಿಳಿಸಿದರು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಗೋವಿಂದು, ಸುಧಾರಾಣಿ, ನರಸಾಪುರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸೊಣ್ಣೇಗೌಡ, ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ರಾಘವೇಂದ್ರ ಹಾಜರಿದ್ದರು.