ಕೆಜಿಎಫ್: ರಾಬರ್ಟಸನ್ಪೇಟೆಯ ಮಹಾವೀರ್ ಜೈನ್ ಕಾಲೇಜಿನಲ್ಲಿ ಜ. 10ರಂದು ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಸಮ್ಮೇಳನವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲು ಎಲ್ಲರೂ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಕೆ.ಎನ್. ಸುಜಾತಾ ಕೋರಿದರು.
ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ತಾಲ್ಲೂಕು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗಡಿಭಾಗದಲ್ಲಿ ನಡೆಯುವ ಕನ್ನಡ ಪರ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದು ಸಾರ್ವಜನಿಕರು ಮತ್ತು ಅಧಿಕಾರಿಗಳ ಕರ್ತವ್ಯ. ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಲು ಸಮಯ ಸಿಗಲಿಲ್ಲ. ಸಮಯದ ಅಭಾವವನ್ನು ಚಿಂತಿಸದೆ, ಕಸಾಪ ಕಾರ್ಯಕರ್ತರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಬೇಕಾಗಿದೆ ಎಂದರು.
‘ಪರಿಷತ್ತಿನ ಆದೇಶದಂತೆ ತಾಲ್ಲೂಕು ಸಮ್ಮೇಳನಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಾಡು, ನುಡಿಯ ಸಂತೆಯು ಮನಸ್ಸಿನಲ್ಲಿ ಉಳಿಯುವಂತಹ ರೀತಿಯಲ್ಲಿ ನಡೆಯಬೇಕು’ ಎಂದು ಕಸಾಪ ಅಧ್ಯಕ್ಷ ವಿ.ಬಿ. ದೇಶಪಾಂಡೆ ಹೇಳಿದರು.
ನಗರಸಭೆಯಿಂದ ₹ 25 ಸಾವಿರ ಮತ್ತು ವೈಯಕ್ತಿಕ ದೇಣಿಗೆಯಾಗಿ ₹ 25 ಸಾವಿರ ನೀಡುವುದಾಗಿ ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಹೇಳಿದರು.