ಕೋಲಾರ: ಅಯೋಧ್ಯ ಬಲಿದಾನ ದಿವಸ್ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ವತಿಯಿಂದ ನಗರದ ಎಸ್ಎನ್ಆರ್ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಮಂಗಳವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಹೋರಾಟದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
‘ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪುಣ್ಯಭೂಮಿ ರಕ್ಷಣೆಗೆ ಇದೇ ದಿನ 1992ರಲ್ಲಿ ಹಲವರು ಹೋರಾಡಿ ಪ್ರಾಣ ತೆತ್ತಿದ್ದರು. ಅವರ ಪ್ರಾಣಾರ್ಪಣೆಯಿಂದಲೇ ಇಂದು ಅಯೋಧ್ಯ ರಾಮನ ಜನ್ಮಭೂಮಿ ಎಂದು ಇಂದು ಮಾನ್ಯತೆ ಪಡೆದಿದೆ. ಅಲ್ಲಿ ರಾಮನ ಬೃಹತ್ ದೇವಾಲಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿದ್ದು, ಇದು ರಾಮಭಕ್ತರಿಗೆ ಸಿಕ್ಕ ಗೆಲುವು’ ಎಂದು ಬಜರಂಗ ದಳ ಮುಖಂಡ ಬಾಲಾಜಿ ಹೇಳಿದರು.
‘ರಾಮಮಂದಿರ ನಿರ್ಮಾಣ ನಮ್ಮ ಧ್ಯೇಯ ಎಂದ ಅನೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇಂದು ವಿವಾದಿತ ಜಾಗವನ್ನು ರಾಮನದ್ದೇ ಎಂದು ಹೇಳಲಾಗಿದ್ದು, ಇದು ರಾಮ ಭಕ್ತರಿಗೆ ಸಿಕ್ಕ ಜಯ. ಹಿಂದೂಗಳ ಆರಾಧ್ಯದೈವ ಶ್ರೀರಾಮನ ಸುಂದರ ದೇವಾಲಯ ನಿರ್ಮಾಣವಾಗುತ್ತಿದ್ದು, ನೂರಾರು ವರ್ಷಗಳ ಹೋರಾಟಕ್ಕೆ ಫಲ ಸಿಗುತ್ತಿದೆ’ ಎಂದು ಬಜರಂಗ ದಳ ಜಿಲ್ಲಾ ಸಂಚಾಲಕ ಬಾಬು ಬಣ್ಣಿಸಿದರು.