ಚಾಮರಾಜನಗರ: ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಶುಕ್ರವಾರ 6 ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದಿದ್ದು, ಅಂತಿಮ ಕಣದಲ್ಲಿ 43 ಅಭ್ಯರ್ಥಿಗಳು ಉಳಿದಿದ್ದಾರೆ.
4 ಕ್ಷೇತ್ರಗಳಿಗೆ ಒಟ್ಟು 53 ನಾಮಪತ್ರ ಸಲ್ಲಿಕೆಯಾಗಿದ್ದವು. ಪರಿಶೀಲನೆ ವೇಳೆ 4 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, ಉಳಿದ 49 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರವಾಗಿದ್ದವು. ನಾಮಪತ್ರ ಹಿಂಪಡೆಯುವ ಕೊನೆಯ ದಿನ ಚಾಮರಾಜನಗರ ಮತ್ತು ಕೊಳ್ಳೇಗಾಲ ಕ್ಷೇತ್ರದಲ್ಲಿ ತಲಾ ಒಬ್ಬರು, ಗುಂಡ್ಲುಪೇಟೆ ಮತ್ತು ಹನೂರು ಕ್ಷೇತ್ರದಲ್ಲಿ ತಲಾ ಇಬ್ಬರು ಅಭ್ಯರ್ಥಿಗಳು ಉಮೇದುವಾರಿಕೆ ಹಿಂಪಡೆದಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ: ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಶಿವಸೇನಾ ಅಭ್ಯರ್ಥಿ ಶ್ರೀಕಂಠಮೂರ್ತಿ ಅವರು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದಾರೆ.
ಅಂತಿಮವಾಗಿ ಕಣದಲ್ಲಿ ಸಿ.ಪುಟ್ಟರಂಗಶೆಟ್ಟಿ (ಕಾಂಗ್ರೆಸ್), ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ (ಬಿಜೆಪಿ), ಎ.ಎಂ. ಮಲ್ಲಿಕಾರ್ಜುನಸ್ವಾಮಿ (ಬಿಎಸ್ಪಿ), ಎಸ್.ಗಣೇಶ್ (ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ), ಡಿ.ನಾಗಸುಂದರ (ಭಾರತೀಯ ರಿಪಬ್ಲಿಕ್ ಪಾರ್ಟಿ), ಜೆ.ನಾರಾಯಣಸ್ವಾಮಿ (ಸಾಮಾನ್ಯ ಜನತಾ ಪಾರ್ಟಿ), ವಾಟಾಳ್ ನಾಗರಾಜ್ (ಕನ್ನಡ ಚಳವಳಿ ವಾಟಾಳ್ ಪಕ್ಷ), ಎಂ.ಆರ್.ಸರಸ್ವತಿ (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿ ) ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ಚಿನ್ನಸ್ವಾಮಿ, ಬಿ.ಪ್ರಸನ್ನಕುಮಾರ್, ಎಂ.ಎಸ್. ಮಲ್ಲಿಕಾರ್ಜುನ್, ರಂಗಸ್ವಾಮಿ, ಬಿ.ಎನ್.ಸುರೇಶ್, ಎಂ. ಹೊನ್ನರಯ್ಯ ಉಳಿದಿದ್ದಾರೆ.
ಗುಂಡ್ಲುಪೇಟೆ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಗಳಾದ ದುಂಡಯ್ಯ ಮತ್ತು ಜಿ.ಮಹೇಶ್ ಎಂಬುವವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಏಳು ಅಭ್ಯರ್ಥಿಗಳು ಕಣದಲ್ಲಿ ಇದ್ದು ಎಂ.ಸಿ.ಮೋಹನಕುಮಾರಿ (ಕಾಂಗ್ರೆಸ್), ಸಿ.ಎಸ್. ನಿರಂಜಕುಮಾರ್ (ಬಿಜೆಪಿ), ಎಸ್.ಗುರುಪ್ರಸಾದ್ (ಬಿಎಸ್ಪಿ), ಸಿ.ಜಿ.ಕಾಂತರಾಜು (ಪ್ರಜಾಪರಿವರ್ತನ ಪಕ್ಷ), ಎ.ಜಿ.ರಾಮಚಂದ್ರರಾವ್ (ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್), ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಸಿದ್ದಯ್ಯ, ಬಿ.ಸಿ.ಶೇಖರ್ರಾಜು ಅವರು ಕಣದಲ್ಲಿದ್ದಾರೆ.
ಕೊಳ್ಳೇಗಾಲ ಮೀಸಲು ಕ್ಷೇತ್ರ: ಪಕ್ಷೇತರ ಅಭ್ಯರ್ಥಿ ರಾಜೇಶ್ ನಾಮಪತ್ರ ಹಿಂಪಡೆದಿದ್ದು ಏಳು ಜನ ಕಣದಲ್ಲಿ ಉಳಿದಿದ್ದಾರೆ. ಎ.ಆರ್. ಕೃಷ್ಣಮೂರ್ತಿ (ಕಾಂಗ್ರೆಸ್), ಜಿ.ಎನ್.ನಂಜುಂಡಸ್ವಾಮಿ (ಬಿಜೆಪಿ), ಎನ್.ಮಹೇಶ್ (ಬಿಎಸ್ಪಿ), ಚಿಕ್ಕ ಸಾವುಕಯ್ಯ (ರಿಪಬ್ಲಿಕನ್ ಪಾರ್ಟಿ), ಲಿಂಗರಾಜು (ರಿಪಬ್ಲಿಕನ್ ಸೇನೆ), ಲಕ್ಷ್ಮಿ ಜಯಶಂಕರ್ (ಎಂ.ಇ.ಪಿ) ನಾಗರತ್ನಾ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.
ಹನೂರು ಕ್ಷೇತ್ರ: ಮಾಜಿ ಶಾಸಕಿ ಪರಿಮಳಾ ನಾಗಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ಸಿದ್ದರಾಜು ನಾಮಪತ್ರ ಹಿಂಪಡೆದಿದ್ದು, 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್.ನರೇಂದ್ರ (ಕಾಂಗ್ರೆಸ್), ಡಾ.ಪ್ರೀತನ್ (ಬಿಜೆಪಿ), ಎಂ.ಆರ್.ಮಂಜುನಾಥ್ (ಜೆಡಿಎಸ್), ಎಸ್.ಗಂಗಾಧರ್ (ಲೋಕ್ ಅದಾಲತ್ ದಳ), ಪ್ರದೀಪ್ ಕುಮಾರ್ (ಎಂಇಪಿ), ಭಾನುಪ್ರಕಾಶ್ (ಕೆಪಿಜಿಪಿ), ವಿಷ್ಣುಕುಮಾರ್ (ಎಡಿಐಎಂಕೆ), ಡಿ.ಶ್ರೀಕಂಠಸ್ವಾಮಿ, (ಸ್ವರಾಜ್ ಇಂಡಿಯಾ). ಪಕ್ಷೇತರ ಅಭ್ಯರ್ಥಿಗಳಾಗಿ ಜಯಪ್ರಕಾಶ್, ಜಾನ್ ಡಾನ್ ಬಾಸ್ಕೊ, ಮಹೇಶ್ ಆರ್, ಸಿದ್ದಪ್ಪ ಆರ್, ಸೆಲ್ವರಾಜ್, ಎಸ್. ಜ್ಞಾನಪ್ರಕಾಶ್, ಮಹೇಶ್ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.