ನಂಗಲಿ: ನಂಗಲಿ ಕೆರೆ ಕೋಡಿಯಿಂದ ಕೆರಸಿಮಂಗಲ ಗ್ರಾಮದವರೆಗೂ ಕೆರೆ ಕಟ್ಟೆಯ ಕೆಳಗೆ ರಸ್ತೆಯನ್ನು ನಿರ್ಮಿಸುತ್ತಿರುವುದು ಅವೈಜ್ಞಾನಿಕವಾಗಿದ್ದು ಕಟ್ಟೆ, ರಾಜಕಾಲುವೆ ಹಾಗೂ ತೂಬುಗಳು ಹಾಳಾಗುತ್ತಿವೆ ಇದರಿಂದ ಕಾಮಗಾರಿ ನಿಲ್ಲಿಸಬೇಕು ಎಂದು ಗ್ರಾಮಸ್ಥರು ದೂರು ನೀಡಿದ್ದರ ಹಿನ್ನೆಲೆಯಲ್ಲಿ ಸಚಿವ ಎಚ್.ನಾಗೇಶ್ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಸಚಿವರು, ‘ಕೆರೆ ಕಟ್ಟೆಯ ಕೆಳಗಿನ ರಸ್ತೆಯ ಕಾಮಗಾರಿಗೆ ಯಾರಾದರೂ ಅಡ್ಡಿಪಡಿಸಿದರೆ ಅಂತಹವರ ವಿರುದ್ಧ ಕೇಸ್ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.
ಕೆರಸಿಮಂಗಲ ಗ್ರಾಮಕ್ಕೆ ಸುಮಾರು ವರ್ಷಗಳಿಂದ ಸಂಚರಿಸಲು ರಸ್ತೆ ಇರಲಿಲ್ಲ. ನಂಗಲಿಯಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಗ್ರಾಮಕ್ಕೆ ಮುದಿಗೆರೆ ಮರವೇಮನೆ ಮಾರ್ಗದ ಮೂಲಕ ಸುಮಾರು 7 ಕಿಲೋ ಮೀಟರ್ ಸುತ್ತಿ ಬರುತ್ತಿದ್ದರು. ಇದನ್ನು ಗಮನಿಸಿ ₹1.5 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಯನ್ನು ನಡೆಸಲಾಗುತ್ತಿದೆ ಎಂದರು.
ಪೊಲೀಸರು ಮನವಿ: ಈ ವೇಳೆ ನಂಗಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎನ್.ಅನಿಲ್ ಕುಮಾರ್ ಮುಳಬಾಗಿಲು ಪೊಲೀಸ್ ವಸತಿ ಗೃಹಗಳ ಸಮುಚ್ಚಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು ಕೊಳವೆ ಬಾವಿ ಕೊರೆಸಿ ಕೊಡುವಂತೆ ಸಚಿವರ ಬಳಿ ಪೊಲೀಸರು ಮನವಿ ಮಾಡಿದರು. ಕೂಡಲೇ ಕೊಳವೆ ಬಾವಿ ಕೊರೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ತಾ.ಪಂ. ಅಧ್ಯಕ್ಷ ಎ.ವಿ.ಶ್ರೀನಿವಾಸ್, ಪ್ರಮುಖರಾದ ಮಾರಪ್ಪ, ಗ್ರಾ.ಪಂ. ಸದಸ್ಯ ಕೆರಸಿಮಂಗಲ ವೆಂಕಟರವಣ, ತಿಮ್ಮಯ್ಯ, ನಂಗಲಿ ರಮೇಶ್, ರಿಯಾಜ್ ಇದ್ದರು.