ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಸಿದ್ದರಾಮಯ್ಯ ಭೇಟಿಗೆ ಒಕ್ಕಲಿಗ ಮುಖಂಡರು ತೀರ್ಮಾನ

Last Updated 20 ಮಾರ್ಚ್ 2023, 13:31 IST
ಅಕ್ಷರ ಗಾತ್ರ

ಕೋಲಾರ: ‘ಸಿದ್ದರಾಮಯ್ಯ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕು. ಇದು ಕ್ಷೇತ್ರದ ಮತದಾರರ ಆಗ್ರಹ ಕೂಡ. ಹೀಗಾಗಿ, ಮಂಗಳವಾರ ಅವರ ಬೆಂಗಳೂರಿನ ನಿವಾಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಒಕ್ಕಲಿಗ ಸಮುದಾಯದವರು ತೆರಳಿ ಒತ್ತಾಯಿಸಲಿದ್ದೇವೆ’ ಎಂದು ಕ್ಷೇತ್ರದ ಕಾಂಗ್ರೆಸ್ ಬೆಂಬಲಿತ ಒಕ್ಕಲಿಗ ಮುಖಂಡರು ಹೇಳಿದರು.

ನಗರದ ಹೊರವಲಯದ ಆರಾಧ್ಯ ಹೋಟೆಲ್‌ನಲ್ಲಿ ಸೋಮವಾರ ಸಭೆ ನಡೆಸಿದ ಮುಖಂಡರು, ‘ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಿದ್ದರಾಮಯ್ಯ ಮನೆ‌ ಮುಂದೆ ಸೇರಬೇಕು. ಕ್ಷೇತ್ರದ ಪ್ರತಿ ಬೂತ್‌ನಿಂದ ಕನಿಷ್ಠ 25 ಜನರು ಬರಬೇಕು. ಐದು ಸಾವಿರಕ್ಕೂ ಹೆಚ್ಚು ಜನ ಸೇರಬೇಕು’ ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾಂಡಹಳ್ಳಿ ಮುರಳಿ ಮಾತನಾಡಿ, ‘ಒಕ್ಕಲಿಗ ಸಮುದಾಯವು ಯಾವುದೇ ಒಂದು ಪಕ್ಷದ ಪರವಾಗಿ ಇಲ್ಲ. ಎಲ್ಲಾ ಪಕ್ಷಗಳೊಂದಿಗೆ ನಮ್ಮ ಸಮುದಾಯ ಗುರುತಿಸಿಕೊಂಡಿದೆ. ಸಿದ್ದರಾಮಯ್ಯ ಅವರಿಗೂ ಬೆಂಬಲವಾಗಿ ನಿಂತಿದೆ. ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ದಲಿತರು, ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ಪರ ಇದೆ ಎಂಬುದನ್ನು ಸಾಬೀತುಪಡಿಸಬೇಕು. ಹೀಗಾಗಿ, ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ತೆರಳಬೇಕು’ ಎಂದು ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ನಂದಿನಿ ಪ್ರವೀಣ್, ‘ಸಿದ್ದರಾಮಯ್ಯ ನಾಲ್ಕು ಬಾರಿ ಕೋಲಾರಕ್ಕೆ ಬಂದು ಸ್ಪರ್ಧಿಸುವುದಾಗಿ ಹೇಳಿದ್ದರು. ಆದರೆ, ವಿರೋಧ ಪಕ್ಷದವರ ತಾಳಕ್ಕೆ ತಕ್ಕಂತೆ ಕೆಲವರು ವರದಿ ತಯಾರಿಸಿ ಸುಳ್ಳು ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲೇಬೇಕು. ಅವರಿಗೆ ಒಕ್ಕಲಿಗ ಸಮುದಾಯದ ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸಲು ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು’ ಎಂದರು.

‌ಕಾಂಗ್ರೆಸ್ ಮುಖಂಡ ಗದ್ದೆಕಣ್ಣೂರು ದಯಾನಂದ್ ಮಾತನಾಡಿ, ‘ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರಿಗೆ ಕೆಲವರು ನೀಡಿರುವ ಸಮೀಕ್ಷೆ ವರದಿ ಸುಳ್ಳು ಎಂದು ಸಾಬೀತುಪಡಿಸಬೇಕು. ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ಮೂಲಕ ನೀರು ನೀಡಿ ಒಕ್ಕಲಿಗ ಸಮುದಾಯ ನೆಮ್ಮದಿಯ ಜೀವನ ನಡೆಸಲು ಕಾರಣಕರ್ತರಾದ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು. ಜೆಡಿಎಸ್ ಮತ್ತು ಬಿಜೆಪಿಯಿಂದ ಒಕ್ಕಲಿಗ ಜನಾಂಗಕ್ಕೆ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

ನಗರಸಭೆ ಸದಸ್ಯ ಮುರಳಿಗೌಡ, ‘ಸಿದ್ದರಾಮಯ್ಯ ಗೆಲ್ಲುತ್ತಾರೆ ಎಂಬ ವಿಚಾರದಿಂದ ವಿಚಲಿತಗೊಂಡಿರುವ ವಿರೋಧ ಪಕ್ಷಗಳು ಒಳಸಂಚು ನಡೆಸುತ್ತಿವೆ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದಿದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲುವುದು ಖಚಿತ. ಇದನ್ನು ಅರ್ಥಮಾಡಿಕೊಂಡು ಹೈಕಮಾಂಡ್ ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಲು ಒಪ್ಪಿಗೆ ನೀಡಬೇಕು’ ಎಂದು ಒತ್ತಾಯಿಸಿದರು.

ಕೋಚಿಮುಲ್ ಮಾಜಿ ನಿರ್ದೇಶಕ ರಾಮಕೃಷ್ಣೇಗೌಡ, ಪರ್ಜೇನಹಳ್ಳಿ ನಾಗೇಶ್, ಪೆಮ್ಮಶೆಟ್ಟಿಹಳ್ಳಿ ಸುರೇಶ್, ತಿಪ್ಪೇನಹಳ್ಳಿ ನಾಗೇಶ್, ವಕ್ಕಲೇರಿ ಲೋಕೇಶ್, ಸತೀಶ್, ಶ್ರೀನಿವಾಸ್, ಅರಹಳ್ಳಿ ಗೋಪಾಲಕೃಷ್ಣ, ರಘು, ಶ್ರೀಧರ್, ಅಂಬರೀಶ್, ಪ್ರಕಾಶ್, ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT