ಕೋಲಾರ: ಸರ್ಕಾರಿ ಶಾಲೆಗಳಲ್ಲಿನ 6ನೇ ತರಗತಿಯಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಬೋಧನೆ ಮಾಡಲು ಆಯ್ಕೆಯಾಗಿರುವ ಶಿಕ್ಷಕ ಅಭ್ಯರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಇತ್ತೀಚೆಗೆ ನೇಮಕಾತಿ ಆದೇಶಪತ್ರ ವಿತರಿಸಿದರು.
ಜಿಲ್ಲೆಯಲ್ಲಿ ಶಿಕ್ಷಕ ಅಭ್ಯರ್ಥಿಗಳ 198 ಹುದ್ದೆ ಖಾಲಿ ಇವೆ. ಆದರೆ, ಅರ್ಹ ಅಭ್ಯರ್ಥಿಗಳಿಲ್ಲದ ಕಾರಣ 29 ಹುದ್ದೆ ಮಾತ್ರ ಭರ್ತಿ ಮಾಡಿ, ಆಯ್ಕೆಯಾದವರಿಗೆ ಆದೇಶಪತ್ರ ವಿತರಿಸಲಾಯಿತು.
‘ಶಿಕ್ಷಕರ ಹುದ್ದೆಗೆ ಆಯ್ಕೆಯಾಗಲು ಅರ್ಹ ವಿದ್ಯಾರ್ಹತೆಯ ನಂತರ ಸಿಇಟಿ ಹಾಗೂ ಟಿಇಟಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು.ಈ ಸಂಬಂಧ 29 ಮಂದಿ ಮಾತ್ರ ಅರ್ಹತೆ ಪಡೆದುಕೊಂಡು ಇದೀಗ ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ’ ಎಂದು ರತ್ನಯ್ಯ ತಿಳಿಸಿದರು.
‘ಸಮಾಜ ವಿಜ್ಞಾನ ಹುದ್ದೆಗಳಿಗೆ 14 ಮಂದಿ, ಇಂಗ್ಲಿಷ್ ವಿಷಯಕ್ಕೆ 13 ಹಾಗೂ ವಿಜ್ಞಾನ- ಗಣಿತ ಶಿಕ್ಷಕರಾಗಿ ಇಬ್ಬರು ಅರ್ಹತೆಯೊಂದಿಗೆ ಆಯ್ಕೆಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
ಇಲಾಖೆ ಡಿವೈಪಿಸಿ ಮೋಹನ್ಬಾಬು, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯತ್ರಿ ಹಾಜರಿದ್ದರು.