ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಬೇರುಗಳಿಗೆ ಜೀವ ತುಂಬಿದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್

Published 19 ನವೆಂಬರ್ 2023, 6:41 IST
Last Updated 19 ನವೆಂಬರ್ 2023, 6:41 IST
ಅಕ್ಷರ ಗಾತ್ರ

ಮಾಲೂರು: ಜಾನಪದ ಗಾಯನವೇ ಉಸಿರಾಗಿಸಿಕೊಂಡಿರುವ ಅಪ್ಪಟ ದೇಸಿ ಪ್ರತಿಭೆ ಪಿಚ್ಚಳ್ಳಿ ಶ್ರೀನಿವಾಸ್. ಶಿಶುವಾಗಿದ್ದಾಗಲೇ ತನ್ನ ತಾಯಿ ಮೂಲಕ ಹಾಡುಗಾರಿಕೆಯನ್ನು ಬಳುವಳಿಯಾಗಿ ಪಡೆದು ನಾಡಿನ ಉದ್ದಗಲಕ್ಕೂ ಜಾನಪದ ಸೊಗಡು ಪಸರಿಸುತ್ತಿದ್ದಾರೆ. ರಂಗ ಕಲಾವಿದರಾಗಿ, ಜನಪದ ಗಾಯಕರಾಗಿ ರಾಜ್ಯ, ದೇಶ, ವಿದೇಶಗಳಲ್ಲಿ ಪ್ರದರ್ಶನ ನೀಡಿರುವ ಹೆಗ್ಗಳಿಕೆ ಇವರದ್ದು.

25ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳನ್ನು ನೀಡಿರುವ ಪಿಚ್ಚಳ್ಳಿ ಶ್ರೀನಿವಾಸ್, ನಾಡು ಕಂಡ ಅಪರೂಪದ ಕಲಾವಿದ. ಇವರ ಹಾಡುಗಾರಿಕೆ ಕೇಳುವಿಕೆಯೇ ಮೈ–ಮನ ಪುಟಿದೇಳಿಸುತ್ತದೆ. ಇವರ ಕ್ರಾಂತಿಗೀತೆಗಳು ನಾಡಿನಲ್ಲಿ ಸಾಮಾಜಿಕ ಮನ್ವಂತರಕ್ಕೆ ಮುನ್ನಡಿ ಹಾಡಿದೆ. ಕರ್ನಾಟಕದ ‘ಗದ್ದರ್‘ ಎಂದೇ ಖ್ಯಾತರಾದ ಇವರು ರಾಜ್ಯ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷರೂ ಹೌದು.

ಮಾಲೂರು ರೈಲ್ವೆ ಬಡಾವಣೆ ಸಮತಾನಗರದಲ್ಲಿ ವಾಸವಾಗಿರುವ ಇವರು ಬಿ.ಎ ಪದವೀಧರ. ಸಿದ್ದಮ್ಮ– ನಡುಪನ್ನ ದಂಪತಿ ಪುತ್ರ. ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಅವರ ಗರಡಿಯಲ್ಲಿ ವಿದ್ಯಾರ್ಥಿ ದೆಸೆಯಲ್ಲೇ ನಾಡಿನ ಪ್ರಮುಖ ಸಾಮಾಜಿಕ ಸಂಘಟನೆಯಾದ ದಲಿತ ಸಂಘರ್ಷ ಸಮಿತಿ ಸಂಪರ್ಕ ಪಡೆದರು. ದಲಿತ ಕಲಾ ಮಂಡಳಿ ಮುಖ್ಯಸ್ಥರಾಗಿ ಆ ತಂಡದ ಮುಖಾಂತರ ರಾಜ್ಯದಾದ್ಯಂತ ಸಾವಿರಾರು ಹೋರಾಟದ ಹಾಡುಗಳ ಮೂಲಕ ಮನೆ –ಮನ ತಲುಪಿದ್ದಾರೆ.

ಬಿ.ವಿ.ಕಾರಂತರ ನೇತೃತ್ವದ ಮೈಸೂರಿನ ರಂಗಾಯಣಕ್ಕೆ ಸೇರ್ಪಡೆಯಾಗಿ 3 ವರ್ಷ ಅಭ್ಯಾಸ ನಡೆಸಿದ್ದಾರೆ. 2 ವರ್ಷ ರಂಗ ಕಲಾವಿದರಾಗಿ ತರಬೇತಿ ಪಡೆದು ರಾಜ್ಯ, ದೇಶ, ವಿದೇಶಗಳಲ್ಲಿ ಒಟ್ಟು 5 ವರ್ಷಗಳಲ್ಲಿ 25ಕ್ಕೂ ಹೆಚ್ಚು ನಾಟಕ ಪ್ರದರ್ಶನಗಳಲ್ಲಿ ಭಾಗಿಯಾಗಿದ್ದಾರೆ.

ಮೂಲ ಜಾನಪದ ದಾಟಿಯಲ್ಲಿ 45ಕ್ಕೂ ಹೆಚ್ಚು ಕ್ಯಾಸೆಟ್‌ಗಳಿಗೆ ಸಂಗೀತ ಸಂಯೋಜನೆ, ಗಾಯನ ಮಾಡಿದ್ದಾರೆ. ವಿಶೇಷವಾಗಿ ಕೈವಾರ ತಾತಯ್ಯನವರ ’ಏನಮ್ಮ ಗಂಗಾ ಭವಾನಿ’ ಹಾಡುಗಳ ಸಿ.ಡಿ ತಯಾರಿಸಿ ಬಿಡುಗಡೆ ಕೂಡ ಮಾಡಿದ್ದಾರೆ.

25 ಹೆಚ್ಚು ಸಾಕ್ಷ್ಯಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. 15 ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. 5 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.

ಸಾಹಿತಿ ದೇವನೂರ ಮಹಾದೇವ ಅವರ ಕಥೆ ಆಧಾರಿತ ’ಅಮಾಸ‘ ಸಿನಿಮಾದ ಗಾಯನಕ್ಕೆ ರಾಜ್ಯ ಸರ್ಕಾರ ನೀಡುವ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾಟಕ ಅಕಾಡೆಮಿ ಪ್ರಶಸ್ತಿ, ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ, ಜಗಜೀವನರಾಂ ಪ್ರಶಸ್ತಿ, ನಾಡಚೇತನ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಸಾಂಸ್ಕೃತಿಕ ಸಚಿವಾಲಯದ ದಕ್ಷಿಣ ಭಾರತ ಸಾಂಸ್ಕೃತಿಕ ಕೇಂದ್ರ ತಂಜಾವೂರು ಎರಡು ಅವಧಿಗೆ ಸದಸ್ಯರಾಗಿದ್ದರು.

ಹಾವೇರಿ ಜಾನಪದ ವಿಶ್ವವಿದ್ಯಾಲಯದ ಗೋಟಗೋಡಿಯಲ್ಲಿ ಎರಡು ಅವಧಿಗೆ ಶೈಕ್ಷಣಿಕ ಪರಿಷತ್ತಿನ ಸದಸ್ಯರಾಗಿ, 2014 ರಿಂದ 2017ರವರೆಗೆ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಪ್ರಸ್ತುತ ‘ಸಾರಂಗರಂಗ’ ಸಾಂಸ್ಕೃತಿಕ ಸಂಸ್ಥೆಯನ್ನು ಮಾಲೂರಿನಲ್ಲಿ ಸ್ಥಾಪಿಸಿ, ಸಂಸ್ಥಾಪಕ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾರೆ. ರಂಗ ಶಿಬಿರ, ನಾಟಕ, ಸಂವಾದ ಮೂಲಕ ಸಾಂಸ್ಕೃತಿಕ ಬೇರುಗಳನ್ನು ಬಲಗೊಳಿಸುವ ಪಯಣದಲ್ಲಿ ಸಾಗುತ್ತಿದ್ದಾರೆ.

ಮೂಲ ಜಾನಪದ ಅರಿಯಲು ‌ಸಲಹೆ

ಮೂಲ ಜಾನಪದ ಬಗ್ಗೆ ಅಧ್ಯಯನ ಮಾಡಲು ಯುವ ಕಲಾವಿದರಿಗೆ ಸಹನೆ ಇಲ್ಲ. ಯೂಟ್ಯೂಬ್ ನೋಡಿ ಕಲಿತು ಹಾಡುವವರಿಗೆ ಅರಿವು ಇರುವುದಿಲ್ಲ. ಯುವ ಗಾಯಕರಿಗೆ ಕಲಿಕೆ ಕೊರತೆ ಇದೆ. ಯುವ ಜನರು ಯೂಟ್ಯೂಬ್ ಅನ್ನೇ ಗುರುವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಜಾನಪದ ಗಾಯಕರ ಬಳಿ ಅಭ್ಯಾಸ ಮಾಡುವ ಮೂಲಕ ಮೂಲವನ್ನು ಅರಿಯಬೇಕು. ಪಿಚ್ಚಳ್ಳಿ ಶ್ರೀನಿವಾಸ್ ಜಾನಪದ ಗಾಯಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT