ಕೋಲಾರ: ‘ಕೊರೊನಾ ಸೋಂಕಿನ ನಿಯಂತ್ರಣದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ವತಿಯಿಂದ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಸದ್ಯದಲ್ಲೇ ದಿನಸಿ ಕಿಟ್ ವಿತರಿಸಲಾಗುತ್ತದೆ’ ಎಂದು ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣಗೌಡ ಭರವಸೆ ನೀಡಿದರು.
ನಗರದ ಇಟಿಸಿಎಂ ಆಸ್ಪತ್ರೆಗೆ ಶನಿವಾರ ರೆಡ್ಕ್ರಾಸ್ ಸಂಸ್ಥೆ ವತಿಯಿಂದ 10 ಪಿಪಿಇ ಕಿಟ್ ಹಾಗೂ ವೈದ್ಯಕೀಯ ಸಿಬ್ಬಂದಿಗೆ ದಿನಸಿ ಮತ್ತು ಮಾಸ್ಕ್ ವಿತರಿಸಿ ಮಾತನಾಡಿ, ‘ಇಟಿಸಿಎಂ ಆಸ್ಪತ್ರೆಯು 100ಕ್ಕೂ ಹೆಚ್ಚು ವರ್ಷಗಳಿಂದ ಆರೋಗ್ಯ ಸೇವೆ ಸಲ್ಲಿಸುತ್ತಿದೆ’ ಎಂದು ಸ್ಮರಿಸಿದರು.
‘ಕೊರೊನಾ ಸೋಂಕಿನ ಆತಂಕದ ನಡುವೆಯೂ ಆಸ್ಪತ್ರೆಯಲ್ಲಿ ನಿರಾತಂಕವಾಗಿ ಜಿಲ್ಲೆಯ ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಕೋವಿಡ್-19 ಚಿಕಿತ್ಸೆಗೂ ಸ್ವಯಂ ಪ್ರೇರಿತವಾಗಿ 5 ಹಾಸಿಗೆ ನಿಗದಿಪಡಿಸಲಾಗಿದೆ. ರೆಡ್ಕ್ರಾಸ್ ಸಂಸ್ಥೆ ವತಿಯಿಂದ ಆಸ್ಪತ್ರೆ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಿರುವುದರಿಂದ ಸಹಾಯವಾಗಿದೆ’ ಎಂದು ಇಟಿಸಿಎಂ ಆಸ್ಪತ್ರೆ ಮುಖ್ಯಸ್ಥ ಜಾನ್ಸನ್ ಹೇಳಿದರು.
‘ಕೊರೊನಾ ಸೋಂಕಿನಿಂದ ಇಡೀ ಜಗತ್ತು ತಲ್ಲಣಗೊಂಡಿದೆ. ಮುಂದುವರಿದ ರಾಷ್ಟ್ರ ಅಮೆರಿಕದಲ್ಲೂ ಸೋಂಕಿನಿಂದ ಹೆಚ್ಚು ಸಾವು ಸಂಭವಿಸಿವೆ. ದೈವ ಬಲದಿಂದ ಮಾತ್ರ ಈ ಸೋಂಕಿನ ಚಿಕಿತ್ಸೆಗೆ ಪರಿಣಾಮಕಾರಿ ಮದ್ದು ಸಿಗಬೇಕಷ್ಟೇ’ ಎಂದು ಜಿಲ್ಲಾ ಮೆಥೋಡಿಸ್ಟ್ ಚರ್ಚ್ನ ಮೇಲ್ವಿಚಾರಕ ಶಾಂತಕುಮಾರ್ ಆಶಿಸಿದರು.
ಇಟಿಸಿಎಂ ನರ್ಸಿಂಗ್ ಶಾಲೆ ಪ್ರಾಂಶುಪಾಲೆ ರೋಸ್ಮೇರಿ, ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಕಾರ್ಯದರ್ಶಿ ವಿ.ಪಿ.ಸೋಮಶೇಖರ್, ಪದಾಧಿಕಾರಿಗಳಾದ ಎಸ್.ನಾಗಶೇಖರ್, ಜಿ.ಶ್ರೀನಿವಾಸ್, ಆರ್.ಶ್ರೀನಿವಾಸನ್ ಹಾಜರಿದ್ದರು.