ಮುಳಬಾಗಿಲು: ತಾಲ್ಲೂಕಿನ ಗಡಿಭಾಗದ ತಿಮ್ಮರಾವುತನಹಳ್ಳಿಯಲ್ಲಿ ಮಂಗಳವಾರ ಗ್ರಾಮದ ಕೆಲವರು ಕನ್ನಡ ಧ್ವಜವಿದ್ದ ಸ್ಥಳವನ್ನು ಹಾಳುಗೆಡವಿದ ಪ್ರಕರಣ ಸುಖಾಂತ್ಯ ಕಂಡಿದೆ.
ಈ ಪ್ರಕರಣ ತಾಲ್ಲೂಕಿನಲ್ಲಿ ಉದ್ವಿಗ್ನ ಪರಿಸ್ಥಿತಿಗೆ ದಾರಿ ಮಾಡಿಕೊಟ್ಟಿತ್ತು. ಕನ್ನಡಪರ ಸಂಘಟನೆಗಳ ಮುಖಂಡರು ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ನಡುವೆಯೇ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ನಾಗನಂದ ಕೆಂಪರಾಜ್ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಠಾಣೆ ಮುಂಭಾಗ ಪ್ರತಿಭಟನೆಗೆ ಮುಂದಾಗಿದ್ದರು. ಪರಿಸ್ಥಿತಿಯ ತೀವ್ರತೆ ಅರಿತ ಕನ್ನಡ ಧ್ವಜವನ್ನು ಹಾಳುಗೆಡವಿದವರೇ ಬುಧವಾರ ಧ್ವಜದ ಸ್ಥಳವನ್ನು ದುರಸ್ತಿ ಮಾಡಿದರು.
ತಹಶೀಲ್ದಾರ್ ಕೆ.ಎನ್. ರಾಜಶೇಖರ್, ತಾ.ಪಂ. ಅಧಿಕಾರಿ ಸಿ. ಶ್ರೀನಿವಾಸ್, ಗ್ರಾಮಾಂತರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.