ಮುಳಬಾಗಲು: ತಾಲೂಕಿನಾದ್ಯಂತ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು, ಸಾಗುವಳಿ ಚೀಟಿ ಅಕ್ರಮಗಳಿಗೆ ಕಡಿವಾಣ ಹಾಗೂ ಸರ್ಕಾರಿ ಗೋಮಾಳ ಮತ್ತು ಗುಂಡುತೋಪುಗಳಿಗೆ ಕಡಿವಾಣ ಹಾಕಲು ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ಸೋಮವಾರ ಮಿನಿ ವಿಧಾನಸೌಧ ಎದುರು ಕುರಿಗಳ ಸಹಿತ ಪ್ರತಿಭಟನೆ ನಡೆಸಿದರು.
ಸುಪ್ರಿಂ ಕೋರ್ಟ್ ಗೋಮಾಳ ಮಂಜೂರು ಮಾಡುವ ವೇಳೆ ಈ ಗ್ರಾಮಗಳಲ್ಲಿ ಜಾನುವಾರುಗಳು ಮೇಯಲು ಜಮೀನು ಬಿಟ್ಟು ಸಾಗುವಳಿ ಮಂಜೂರು ಮಾಡಬೇಕು ಎಂದು ಸ್ಪಷ್ಟಪಡಿಸಿದೆ. ಆದರೆ ಆ ನಿಯಮವನ್ನು ಅಧಿಕಾರಿಗಳ ಗಾಳಿಗೆ ತೂರಿರುವ ಕಾರಣ ಜಾನುವಾರುಗಳು ಗ್ರಾಮಾಂತರ ಪ್ರದೇಶದಲ್ಲಿ ಪರದಾಡಬೇಕಾಗಿದೆ ಎಂದು ದೂರಿದರು.
ತಾಲೂಕಿನ ಟಿ.ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 36\2ರಲ್ಲಿ ಗೋಮಾಳ ಜಮೀನನ್ನು ಯಾರಿಗೂ ಮಂಜೂರು ಮಾಡಬಾರದು. ಈ ಗ್ರಾಮದಲ್ಲಿ 80 ಕುಟುಂಬಗಳಿದ್ದು ಸುಮಾರು ಇಪ್ಪತ್ತು ಸಾವಿರ ಕುರಿಗಳನ್ನು ಹೊಂದಿವೆ. ಈ ಜಮೀನನ್ನು ಜಾನುವಾರು, ಕುರಿ ಮೇವುಗೆ ಬಿಡಬೇಕು ಎಂದು ಒತ್ತಾಯಿಸಿದರು.
ಇಂತಹ ಜಾನುವಾರುಗಳಿಗೆ ಜಮೀನು ಕಾಯ್ದಿರಿಸದ ಕಡೆ ಸಹ ಗೋಮಾಳ ಮತ್ತು ಸರ್ಕಾರಿ ಜಮೀನುಗಳನ್ನು ಮೀಸಲಿಡಲು ಒತ್ತಾಯಿಸಿದರು.
ಕೆರೆಗಳು ರಿಯಲ್ ಎಸ್ಟೇಟ್ ಹಾಗೂ ಭೂಗಳ್ಳರ ಪಾಲಾಗುತ್ತಿದ್ದು, ಅವುಗಳನ್ನು ಸಂರಕ್ಷಿಸಬೇಕು. ಕೆರೆ ಮತ್ತು ರಾಜುಕಾಲುವೆಗಳ ಒತ್ತುವರಿಯನ್ನು ತಡೆಯಬೇಕು. ಗುಂಡುತೋಪುಗಳನ್ನು ಅಕ್ರಮವಾಗಿ ಖಾತೆ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಉಪ ತಹಶೀಲ್ದಾರ್ ವೆಂಕಟೇಶಯ್ಯ ಅವರಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಫಾರೂಕ್ ಪಾಷಾ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮರಗಲ್ ಶ್ರೀನಿವಾಸ್, ಹಸಿರು ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಯಲವಹಳ್ಳಿ ಪ್ರಭಾಕರ್, ರಂಜಿತ್ಕುಮಾರ್ ಇದ್ದರು.