ಕೋಲಾರ: ರೈತರ ಸಮಗ್ರ ಏಳಿಗೆಗಾಗಿ ರೈತ ಅಭಿವೃದ್ಧಿ ಪ್ರಾಧಿಕಾರ ರಚಿಸುವಂತೆ ಆಗ್ರಹಿಸಿ ರೈತ ಸಂಘ ಸದಸ್ಯರು ಹೆಚ್ಚುವರಿ ಜಿಲ್ಲಾಧಿಕಾರಿ ಸ್ನೇಹಾ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಆ ಬಳಿಕ ಅಧಿಕಾರದಲ್ಲಿದ್ದಾಗ ರೈತರ ಸಮಸ್ಯೆಗಳು ಕಣ್ಣಿಗೆ ಕಾಣಿಸುವುದಿಲ್ಲ. ಹೆಸರಿಗೆ ಮಾತ್ರವೇ ರೈತ ದೇಶದ ಬೆನ್ನೆಲುಬು, ಅನ್ನದಾನ ಎಂದು ಭಾಷಣಗಳಲ್ಲಿ ಮಾತ್ರ ಹೇಳಿಕೊಂಡು ಹೇಳಿಕೆಗಳಿಗಷ್ಟೇ ರೈತರ ಅಭಿವೃದ್ಧಿಯನ್ನು ಸೀಮಿತಗೊಳಿಸಿದ್ದಾರೆ’ ಎಂದರು.
‘ಒಂದು ಜಾತಿಗೆ ಪ್ರಾಧಿಕಾರ ಸ್ಥಾಪನೆ ಮಾಡಿದ್ದೇ ಆದಲ್ಲಿ ಇತರೆ ಜಾತಿಗಳವರೂ ತಮ್ಮ ಸಮುದಾಯದವರು ಸಾಕಷ್ಟು ಹಿಂದೆ ಉಳಿದಿದ್ದು, ಪ್ರಾಧಿಕಾರ ರಚಿಸುವಂತೆ ಆಗ್ರಹಿಸುತ್ತಾರೆ. ಹೀಗೆ ಎಲ್ಲ ಜಾತಿಗಳಿಗೂ ಪ್ರಾಧಿಕಾರಗಳನ್ನು ರಚಿಸುತ್ತಾ ಹೋದರೆ ಅನುದಾನಗಳನ್ನು ಹಂಚಿಕೆ ಮಾಡುವುದು ಹೇಗೆ, ರಾಜ್ಯದ ಸಮಗ್ರ ಅಭಿವೃದ್ಧಿ ಹೇಗೆ ಎನ್ನುವ ಪರಿಜ್ಞಾನವೂ ಸರ್ಕಾರಕ್ಕೆ ಇಲ್ಲದಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಘಟದಕ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಮಾತನಾಡಿ, ‘ಒಂದು ವೇಳೆ ಜಾತಿಗೊಂದು, ಧರ್ಮಕ್ಕೊಂದು, ಭಾಷೆಗೊಂದು ಪ್ರಾಧಿಕಾರ ಮಾಡು
ತ್ತೇವೆ ಎನ್ನುವುದಾದರೆ, ಅನ್ನದಾತರ ಸಂಕಷ್ಟಗಳಿಗೆ ಸ್ಪಂದಿಸುವ ರೈತರ ಸಮಗ್ರ ಏಳಿಗೆಗಾಗಿ ರೈತ ಅಭಿವೃದ್ಧಿ ಪ್ರಾಧಿಕಾರ
ವನ್ನು ಮೊದಲು ರಚನೆ ಮಾಡಲಿ. ಇದುವರೆಗಿನ ಸರ್ಕಾರಗಳು ರೈತರ ಅನುಕೂಲಕ್ಕಾಗಿ ಹೇಳಿಕೊಳ್ಳುವಂತಹ ಯಾವುದೇ ಕೆಲಸಗಳನ್ನು ಮಾಡಿಕೊಟ್ಟಿಲ್ಲ. ಈಗಿನ ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇದ್ದಿದ್ದೇ ಆದಲ್ಲಿ ಜಾತಿಗೊಂದು ಅಭಿವೃದ್ಧಿ ಪ್ರಾಧಿಕಾರಗಳನ್ನು ರಚಿಸುವ ಮುನ್ನ ರೈತರ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಿ’ ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿಯು ಮನವಿಯನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸುವ ಭರವಸೆ ನೀಡಿದರು.
ಸಂಘಟನೆಯ ಕೋಲಾರ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ಸದಸ್ಯರಾದ ಚಾಂದ್ಪಾಷಾ, ನವಾಜ್, ಜಮೀರ್, ಕಿರಣ್, ಜಾವೇದ್, ಶಿವು, ನವೀನ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.