ಮಾಲೂರು: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಒತ್ತಾಯಿಸಿ ಪಟ್ಟಣದ ಮಾರಿಕಾಂಭ ವೃತ್ತದಲ್ಲಿ ಕರವೇ (ಪ್ರವೀಣ್ ಕುಮಾರ್ ಶೆಟ್ಟಿ) ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಬಳಿಕ ಯತ್ನಾಳ್ ಅವರ ಭೂತದಹನ ಮಾಡಿದರು.
ಕರವೇ ತಾಲ್ಲೂಕು ಅಧ್ಯಕ್ಷ ಶಿವಾರ ನಾರಾಯಣಸ್ವಾಮಿ ಮಾತನಾಡಿ, ಯತ್ನಾಳ್ ಅವರು ಕರ್ನಾಟಕ ಬಂದ್ ಮಾಡುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನು ಕೆಣಕಿದ್ದಾರೆ ಎಂದು ದೂರಿದರು.
50 ವರ್ಷಗಳಿಂದ ನಾಡು-ನುಡಿ, ಗಡಿ, ಭಾಷೆಗೆ ಕುತ್ತು ಬಂದಾಗ ಕನ್ನಡಪರ ಸಂಘಟನೆಗಳು ಧ್ವನಿ ಎತ್ತಿವೆ. ಆದರೆ, ರೋಲ್ಕಾಲ್ ಹೋರಾಟಗಾರರು ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಕನ್ನಡ ವಿರೋಧಿ ಶಾಸಕರಿಗೆ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಿರಿ ನೀಡಬಾರದು ಎಂದು ಆಗ್ರಹಿಸಿದರು.
ಕೂಡಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕನ್ನಡ ಪರ ಹೋರಾಟಗಾರರ ಕ್ಷಮೆ ಕೇಳಬೇಕು. ಇಲ್ಲವಾದರೆ ಇಡೀ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.