ಕೋಲಾರ: ನಗರದ ಕಿಲಾರಿಪೇಟೆಯ ರುಕ್ಮಿಣಿ ಸತ್ಯಭಾಮ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ದೀಪೋತ್ಸವ, ಪಂಡರಿ ಭಜನೆ, ಶ್ರೀಕೃಷ್ಣಕೋಟಿ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ದೇವಾಲಯದ ಮುಂಭಾಗದಲ್ಲಿ ಮಧ್ಯಾಹ್ನ ನಡೆದ ಕಲ್ಯಾಣೋತ್ಸವದಲ್ಲಿ ನೂರಾರು ಭಕ್ತರು ಪಾಲ್ಗೊಂಡರು.
ರುಕ್ಮಿಣಿ ಸತ್ಯಭಾಮ ಶ್ರೀವೇಣುಗೋಪಾಲಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಕಲ್ಯೋಣೋತ್ಸವದ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. ಬಳಿಕ ದೇವರ ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ವೀರಗಾಸೆ ಕುಣಿತ, ಗಾರುಡಿ ಗೊಂಬೆ, ಕೀಲು ಕುದುರೆ, ಡೋಲು ಕುಣಿತ, ತಮಟೆ ವಾದನ ಹಾಗೂ ಜನಪದ ಕಲಾವಿದರು ಮೆರವಣಿಗೆಗೆ ಮೆರುಗು ನೀಡಿದರು.
ನಗರದ ಸಿ.ಬೈರೇಗೌಡ ನಗರದ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಅಂಗವಾಗಿ ಭಾನುವಾರ ಮುಂಜಾನೆಯಿಂದಲ್ಲೇ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಗುತ್ತಿಗೆದಾರ ವಿ.ಕೃಷ್ಣರೆಡ್ಡಿ, ನಗರಸಭೆ ಮಾಜಿ ಸದಸ್ಯರಾದ ಮೇಸ್ತ್ರೀ ನಾರಾಯಣಸ್ವಾಮಿ, ವೆಂಕಟೇಶ್, ಮುಖಂಡರಾದ ಶಬರೀಷ್, ರಮೇಶ್, ಚೌಡಪ್ಪ, ಮುನಿಸ್ವಾಮಪ್ಪ, ಆರ್.ಗೋಪಾಲ್, ಮುನಿವೆಂಕಟ, ಕೃಷ್ಣ, ಲಕ್ಷ್ಮೀನಾರಾಯಣ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ಹಾಜರಿದ್ದರು.