ಕೋಲಾರ: ಸರ್ಕಾರದ ಆದೇಶದಂತೆ ಸೋಮವಾರದಿಂದ (ಮೇ 10) ಲಾಕ್ಡೌನ್ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಲ್ಲೆಯಾದ್ಯಂತ ಶನಿವಾರ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದರು.
ಜನತಾ ಕರ್ಫ್ಯೂ ಲೆಕ್ಕಿಸದೆ ಮನೆಯಿಂದ ಹೊರಬಂದ ಜನರು ಕೋವಿಡ್ನ ಭಯ ಮರೆತು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಓಡಾಡಿದರು. ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಮಾರುಕಟ್ಟೆಗಳಲ್ಲಿ ಮತ್ತು ಅಂಗಡಿಗಳ ಬಳಿ ನೂರಾರು ಸಂಖ್ಯೆಯಲ್ಲಿ ಗುಂಪುಗೂಡಿದರು.
ಜಿಲ್ಲೆಯಾದ್ಯಂತ ಜನತಾ ಕರ್ಫ್ಯೂಗೆ ಜನರಿಂದ ಹಾಗೂ ವರ್ತಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಜನತಾ ಕರ್ಫ್ಯೂ ಭಾಗವಾಗಿ ಹಲವು ದಿನಗಳಿಂದ ಮನೆಗಳಲ್ಲೇ ಉಳಿದಿದ್ದ ಜನರು ಸಂಪೂರ್ಣ ಲಾಕ್ಡೌನ್ ಸಂಗತಿ ತಿಳಿದು ಮನೆಯಿಂದ ಹೊರ ಬಂದು ಮನಸೋಇಚ್ಛೆ ಓಡಾಡಿದರು. ಮಾಸ್ಕ್ ಧರಿಸದೆ ಅನಗತ್ಯವಾಗಿ ಕಾರು, ಬೈಕ್ಗಳಲ್ಲಿ ಸುತ್ತಾಡಿದರು.
ಜನರು ಮಾರುಕಟ್ಟೆ ಮತ್ತು ಅಂಗಡಿಗಳಲ್ಲಿ ಅಂತರ ಪಾಲಿಸದೆ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಜತೆಗೆ ಹಲವೆಡೆ ಬಟ್ಟೆ, ಪಾದರಕ್ಷೆ, ಪಾತ್ರೆ ಅಂಗಡಿ ಮಾಲೀಕರು ಮಳಿಗೆಯ ಬಾಗಿಲು ತೆರೆದು ವಹಿವಾಟು ನಡೆಸಿದರು. ಎಪಿಎಂಸಿ, ಮಾರುಕಟ್ಟೆಗಳು ಹಾಗೂ ವಾಣಿಜ್ಯ ಪ್ರದೇಶಗಳಲ್ಲಿ ಜನಜಂಗುಳಿ ಮತ್ತು ವಾಹನ ದಟ್ಟಣೆ ಹೆಚ್ಚಿತ್ತು. ವಾಣಿಜ್ಯ ಸ್ಥಳಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿ ವಾಹನಗಳು ಕಿಲೋಮೀಟರ್ಗಟ್ಟಲೇ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
ಆಟಕ್ಕುಂಟು ಲೆಕ್ಕಕ್ಕಿಲ್ಲ: ಎಲ್ಲೆಡೆ ಕೋವಿಡ್ ಮಾರ್ಗಸೂಚಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಾಸ್ಕ್ ಧರಿಸದೆ ಬಂದಿದ್ದ ಬಹುಪಾಲು ಜನರು ವಸ್ತುಗಳ ಖರೀದಿಗೆ ಮುಗಿಬಿದ್ದರು. ಅಂತರ ಕಾಯ್ದುಕೊಳ್ಳದ ಜನರನ್ನು ನಿಯಂತ್ರಿಸುವುದು ವರ್ತಕರಿಗೆ ದೊಡ್ಡ ತಲೆ ನೋವಾಯಿತು. ಪೊಲೀಸರು ಸಹ ಜನರನ್ನು ನಿಯಂತ್ರಿಸುವ ಪ್ರಯತ್ನ ಮಾಡಲಿಲ್ಲ.
ಎಪಿಎಂಸಿಗಳಲ್ಲಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಶನಿವಾರ ಭರ್ಜರಿ ವಹಿವಾಟು ನಡೆಯಿತು. ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಲೋಡ್ಗಟ್ಟಲೇ ತರಕಾರಿ ಸರಕು ಎಪಿಎಂಸಿಗೆ ಬಂದಿತು. ವರ್ತಕರು ಮಂಡಿ ಬಾಗಿಲು ತೆರೆದು ಎಂದಿನಂತೆ ವಹಿವಾಟು ನಡೆಸಿದರು.
ಕಾರ್ಮಿಕರ ವಲಸೆ: ಸರ್ಕಾರ ಮೇ 10ರಿಂದ ಅನ್ವಯವಾಗುವಂತೆ ರಾಜ್ಯವ್ಯಾಪಿ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರು ತಮ್ಮ ರಾಜ್ಯ, ಜಿಲ್ಲೆ, ಊರುಗಳತ್ತ ಪ್ರಯಾಣ ಬೆಳೆಸಿದರು.
ಲಾಕ್ಡೌನ್ ಕಾರಣಕ್ಕೆ ಕೆಲಸ ಇಲ್ಲದ ಸನ್ನಿವೇಶ ಸೃಷ್ಟಿಯಾಗುವ ಆತಂಕದಿಂದ ವಲಸೆ ಕಾರ್ಮಿಕರು ತಂಡೋಪತಂಡವಾಗಿ ತಮ್ಮ ಊರುಗಳಿಗೆ ಹಿಂದಿರುಗಿದರು. ರೈಲು ಹಾಗೂ ಖಾಸಗಿ ವಾಹನಗಳು ಕಾರ್ಮಿಕರಿಂದ ತುಂಬಿ ಹೋಗಿದ್ದವು.
ಮದ್ಯ ಖರೀದಿ: ಹೋಟೆಲ್ ಮತ್ತು ಮದ್ಯದಂಗಡಿಗಳಲ್ಲಿ ಸರ್ಕಾರದ ಆದೇಶದಂತೆ ಪಾರ್ಸಲ್ ಸೇವೆಗೆ ಮಾತ್ರ ಅವಕಾಶ ನೀಡಲಾಯಿತು. ಲಾಕ್ಡೌನ್ ಹಿನ್ನೆಲೆಯಲ್ಲಿ ಮದ್ಯದ ಅಂಗಡಿಗಳು ಬಂದ್ ಆಗುತ್ತವೆ ಎಂಬ ಕಾರಣಕ್ಕೆ ಮದ್ಯಪ್ರಿಯರು ಮದ್ಯ ಖರೀದಿಗೆ ಹೆಚ್ಚಿನ ಉತ್ಸಾಹ ತೋರಿದರು. ಮದ್ಯದಂಗಡಿಗಳ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.