ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಮುನಿಸ್ವಾಮಿ ರೌಡಿಸಂ ಮಾಡುತ್ತಿದ್ದಾರೆ: ಬಂಗಾರಪೇಟೆ MLA ನಾರಾಯಣಸ್ವಾಮಿ ಆರೋಪ

ಬಂಗಾರಪೇಟೆ ಶಾಸಕ ಕಾಂಗ್ರೆಸ್‌ನ ಎಸ್‌.ಎನ್. ನಾರಾಯಣಸ್ವಾಮಿ ವಾಗ್ದಾಳಿ
Published 10 ಸೆಪ್ಟೆಂಬರ್ 2023, 12:45 IST
Last Updated 10 ಸೆಪ್ಟೆಂಬರ್ 2023, 12:45 IST
ಅಕ್ಷರ ಗಾತ್ರ

ಕೋಲಾರ: ‘ಅರಣ್ಯ ಇಲಾಖೆಯ ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸುವ ಮೂಲಕ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ತಮ್ಮ ಹಿಂದಿನ ಪ್ರವೃತಿ ರೌಡಿಸಂ ಪ್ರದರ್ಶಿಸಿದ್ದಾರೆ. ಹೊಡಿಬಡಿ ಹಾಗೂ ಕಾಂಪೌಂಡ್‌ ಹಾಕುವ ಸಂಸ್ಕೃತಿ ಮುಂದುವರಿಸಿದ್ದಾರೆ’ ಎಂದು ಬಂಗಾರಪೇಟೆ ಶಾಸಕ ಕಾಂಗ್ರೆಸ್‌ನ ಎಸ್‌.ಎನ್. ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು.

ಭಾನುವಾರ ತಾಲ್ಲೂಕಿನ ಕೆಂಬೋಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಶ್ರೀನಿವಾಸಪುರದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ಮುನಿಸ್ವಾಮಿ ನಡೆದುಕೊಂಡಿರುವ ರೀತಿ ಖಂಡನೀಯ. ಈ ವರ್ತನೆ ಅವರಿಗೆ ಶೋಭೆ ತರುವಂಥದ್ದಲ್ಲ’ ಎಂದರು.

‘ಯಾವುದೇ ಅಧಿಕಾರಿಗೆ ತಮ್ಮ ಕೆಲಸ ಕಾರ್ಯ ಮಾಡಲು ಜನಪ್ರತಿನಿಧಿಗಳು ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಕೆಲಸದಲ್ಲಿ ಲೋಪದೋಷವಿದ್ದರೆ ಅವರನ್ನು ದಂಡಿಸಲು ಕಾನೂನಿನಲ್ಲಿ ಅವಕಾಶವಿದೆ’ ಎಂದರು.

‘ಯಾರೇ ಆಗಲಿ ಅಧಿಕಾರಿಗಳ ಮೇಲೆ ಕೈಮಾಡುವುದು, ಅವರ ಕೆಲಸಗಳಿಗೆ ಅಡ್ಡಿಪಡಿಸುವುದು ಕಾನೂನು ಬಾಹಿರ. ಹೀಗಾಗಿ, ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಮೇಲೆ ಸೇಡಿನ ಕ್ರಮಕ್ಕೆ ಪ್ರಚೋದಿಸಿದರೆ ಸಂಸದರ ಮೇಲೂ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸರ್ಕಾರ ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ. ರೌಡಿಸಂ, ಗೂಂಡಾಗಿರಿ ಶೋಭೆ ತರುವುದಿಲ್ಲ’ ಎಂದು ಹೇಳಿದರು.

ವಿಶೇಷ ಪ್ಯಾಕೇಜ್‌

‘ಮುಖ್ಯಮಂತ್ರಿಗೆ ಭೇಟಿ ಮಾಡಿ ರೇಷ್ಮೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್‌ ನೀಡುವಂತೆ ಮನವಿ ಮಾಡಿದ್ದೇವೆ. ಸದ್ಯದಲ್ಲೇ ಆ ಸೌಲಭ್ಯ ಸಿಗಲಿದೆ. ರೇಷ್ಮೆ ಬೆಳೆಯುವ ರೈತರಿಗೆ ಹೆಚ್ಚಿನ ಉತ್ತೇಜನ ನೀಡಬೇಕು. ಆ ಮೂಲಕ ರೈತರ ಸಬಲೀಕರಣ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT