ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುತಂತ್ರಿ ಮುನಿಯಪ್ಪ ಆಟ ನಡೆಯಲ್ಲ: ಶಾಸಕ ಕೊತ್ತೂರು ಮಂಜುನಾಥ್ ಆಕ್ರೋಶ

Last Updated 12 ಏಪ್ರಿಲ್ 2019, 15:23 IST
ಅಕ್ಷರ ಗಾತ್ರ

ಕೋಲಾರ: ‘ಕೆ.ಸಿ ವ್ಯಾಲಿ ಯೋಜನೆಗೆ ಅಡ್ಡಿಪಡಿಸಿದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಲೋಕಸಭಾ ಚುನಾವಣೆಯಲ್ಲಿ ಸೋತು ಕೊಚ್ಚಿ ಹೋಗುತ್ತಾರೆ’ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆ ಬಳಿ ಶುಕ್ರವಾರ ನಡೆದ ಕೆ.ಸಿ ವ್ಯಾಲಿ ನೀರಿಗೆ ಗಂಗಾಪೂಜೆ ಸಲ್ಲಿಸಿ ಮತ್ತು ಬಾಗಿನ ಅರ್ಪಿಸಿ ಮಾತನಾಡಿ, ‘ಕುತಂತ್ರಿ ಮುನಿಯಪ್ಪರ ಆಟ ಈ ಬಾರಿ ನಡೆಯುವುದಿಲ್ಲ. ನಾವು ಬಿಗಿಯಾಗಿದ್ದೇವೆ, ಅವರನ್ನು ಸೋಲಿಸಲು ಅಖಾಡ ಸಿದ್ಧವಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಬರಗಾಲ ತೀವ್ರವಾಗಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಬೆಂಗಳೂರಿನಿಂದ ಹರಿದು ತಮಿಳುನಾಡಿಗೆ ವ್ಯರ್ಥವಾಗಿ ಹೋಗುತ್ತಿದ್ದ ಕೊಳಚೆ ನೀರನ್ನು ಸಂಸ್ಕರಿಸಿ ರೈತರ ಸಂಕಷ್ಟ ಪರಿಹರಿಸಲು ಜಿಲ್ಲೆಗೆ ತರಲು ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಳಿಸಲಾಯಿತು. ಆದರೆ, ಮುನಿಯಪ್ಪ ಯೋಜನೆಗೆ ಅಡ್ಡಗಾಲು ಹಾಕಿದರು.

‘ನನ್ನ ಹೋರಾಟ ಮುನಿಯಪ್ಪ ವಿರುದ್ಧ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನ್ನ ರಾಜಕೀಯ ಭವಿಷ್ಯ ಹಾಳು ಮಾಡಿದ ಮಹಾನುಭಾವ ಮುನಿಯಪ್ಪರನ್ನು ಸೋಲಿಸುವವರಿಗೂ ವಿರಮಿಸುವುದಿಲ್ಲ’ ಎಂದು ಗುಡುಗಿದರು.

ರಮೇಶ್‌ಕುಮಾರ್‌ ಪರಿಶ್ರಮ: ‘ಜಿಲ್ಲೆಯ 126 ಕೆರೆ ತುಂಬಿಸುವುದು ಮತ್ತು ಅಂತರ್ಜಲ ವೃದ್ಧಿಸುವುದು ಕೆ.ಸಿ ವ್ಯಾಲಿ ಯೋಜನೆಯ ಉದ್ದೇಶ. ಸ್ಪೀಕರ್ ರಮೇಶ್‌ಕುಮಾರ್‌ರ ಪರಿಶ್ರಮದಿಂದ ಈ ಯೋಜನೆ ಅನುಷ್ಠಾನಗೊಂಡಿದೆ. ಯೋಜನೆ ನೀರಿನಿಂದ ಹೆಚ್ಚುವರಿಯಾಗಿ 180 ಕೆರೆ ತುಂಬಿಸಲಾಗುವುದು’ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ವಿವರಿಸಿದರು.

ತಮ್ಮ ಪರಿಶ್ರಮದಿಂದ ಕೆ.ಸಿ ವ್ಯಾಲಿ ಯೋಜನೆ ಅನುಷ್ಠಾನಗೊಂಡಿತೆಂದು ಮುನಿಯಪ್ಪ ಅವರು ಹೇಳಿಕೊಳ್ಳುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾರಾಯಣಸ್ವಾಮಿ, ‘ಸಂಸದರು ಆ ರೀತಿ ಹೇಳಿರುವ ಸಂಗತಿ ನನಗೆ ಗೊತ್ತಿಲ್ಲ. ಬರದಿಂದ ಜಿಲ್ಲೆಯ ಜನ ಬಾಯಾರಿದ್ದಾರೆ. ಇಂತಹ ಸಂದರ್ಭದಲ್ಲಿ ಯೋಜನೆಗೆ ತಡೆಯೊಡ್ಡಲು ಯತ್ನಿಸಿದವರಿಗೆ ದೇವರು ಇನ್ನಾದರೂ ಒಳ್ಳೆಯ ಬುದ್ದಿ ಕೊಡಲಿ’ ಎಂದು ಮಾರ್ಮಿಕವಾಗಿ ನುಡಿದರು.

ಆಟವಾಡುತ್ತಿದ್ದಾರೆ: ‘ಕೆ.ಸಿ ವ್ಯಾಲಿ ಯೋಜನೆ ಜಾರಿಯಾಗಲು ತಾನು ಕಾರಣವೆಂದು ಯಾರೋ ಬೀದಿ ಬೀದಿಯಲ್ಲಿ ಹೇಳುತ್ತಿದ್ದಾರೆ. ಆದರೆ, ಈ ಯೋಜನೆ ಜಾರಿಯ ಕೀರ್ತಿ ರಮೇಶ್‌ಕುಮಾರ್‌ ಹಾಗೂ ಯೋಜನೆಗೆ ಒಂದೇ ಬಾರಿಗೆ ₹ 1,400 ಕೋಟಿ ನೀಡಿದ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಅಭಿಪ್ರಾಯಪಟ್ಟರು.

‘ಕೆ.ಸಿ ವ್ಯಾಲಿ ಯೋಜನೆಗೆ ಅಡ್ಡಿಪಡಿಸಿದ ಸಂಸದ ಮುನಿಯಪ್ಪ ಜಿಲ್ಲೆಯ ಜನರೊಂದಿಗೆ ಆಟವಾಡುತ್ತಿದ್ದಾರೆ ಜನರೇ ಅವರಿಗೆ ಮುಂದೆ ಪಾಠ ಕಲಿಸುತ್ತಾರೆ. ನಾನು ಹಿಂದೆ ಶಾಸಕನಾಗಿದ್ದಾಗ ಯರಗೋಳ್‌ ಯೋಜನೆ ಮಂಜೂರು ಮಾಡಿಸಿದ್ದೆ. ನಂತರ ಚುನಾವಣೆಯಲ್ಲಿ ಸೋತೆ. ಬಳಿಕ ಸಂಸದ ಮುನಿಯಪ್ಪ ಹಾಗೂ ಶಾಸಕ ವರ್ತೂರು ಪ್ರಕಾಶ್ ಡ್ಯಾಂ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಿಲ್ಲ’ ಎಂದು ಟೀಕಿಸಿದರು.

ನೀರು ಬರುತ್ತದೆ: ‘ಇದೀಗ ಮತ್ತೆ ನಾನು ಶಾಸಕನಾಗಿದ್ದೇನೆ, ಯರಗೋಳ್‌ ಕಾಮಗಾರಿ ಸ್ಥಳ ವೀಕ್ಷಿಸಿ ಶೀಘ್ರವೇ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆರೇಳು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ನಗರಕ್ಕೆ ನೀರು ಬರುತ್ತದೆ’ ಎಂದು ಭರವಸೆ ನೀಡಿದರು.

‘ಅವಿಭಜಿತ ಕೋಲಾರ ಜಿಲ್ಲೆಗೆ ನೀರು ನೀಡುವ ಹೊಣೆ ಸರ್ಕಾರದ್ದು. ಕೆ.ಸಿ ವ್ಯಾಲಿ ನೀರು ಬಂದಿದೆ ಎಂದು ರೈತರು ಭತ್ತದ ಬೆಳೆ ಬೆಳೆಯಲು ಮುಂದಾಗಬೇಡಿ. ಕೆರೆಗಳ ನೀರು ಬಳಸುವಂತಿಲ್ಲ, ಅದು ಅಂತರ್ಜಲ ವೃದ್ಧಿಗೆ ಮಾತ್ರ. ಕೆರೆಯ ಅಕ್ಕಪಕ್ಕ ಕೊಳವೆ ಬಾವಿ ಕೊರೆಸಿ ಬೆಳೆ ಬೆಳೆಯಲು ಅಡ್ಡಿಯಿಲ್ಲ. ಬಾಯಾರಿದ ಜನ ನೀರು ಬಂತೆಂದು ಖುಷಿಯಿಂದ ಇಲ್ಲಿಗೆ ಬಂದಿದ್ದಾರೆ. ರಾಜಕೀಯದ ವಿಷಯ ಇಲ್ಲಿ ಮಾತನಾಡಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT