ಕೋಲಾರ: ‘ಬ್ರಹ್ಮರ್ಷಿ ನಾರಾಯಣಗುರು ಸಮಾನತೆಯ ಸಂದೇಶ ಸಾರಿದ ಹರಿಕಾರರು’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಬಣ್ಣಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಆರ್ಯ ಈಡಿಗರ ಸಂಘದ ಸಹಯೋಗದಲ್ಲಿ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬ್ರಹ್ಮರ್ಷಿ ನಾರಾಯಣಗುರು ಜಯಂತಿಯಲ್ಲಿ ಮಾತನಾಡಿ, ‘ಅಧ್ಯಾತ್ಮಿಕ ನಾಯಕ ಹಾಗೂ ಸಮಾಜ ಸುಧಾರಕರಾಗಿದ್ದ ನಾರಾಯಣಗುರು ಕೇರಳದಲ್ಲಿ ಅನ್ಯಾಯ ಮತ್ತು ಜಾತಿ ಭೇದದ ವಿರುದ್ಧ ಸುಧಾರಣಾ ಚಳವಳಿ ಆರಂಭಿಸಿದರು’ ಎಂದು ಹೇಳಿದರು.
‘ಜಾತ್ಯಾತೀತ ವಾದಿಯಾಗಿದ್ದ ನಾರಾಯಣಗುರು ಪುರೋಹಿತಶಾಹಿ ವ್ಯವಸ್ಥೆ ವಿರುದ್ಧ ಧ್ವನಿ ಎತ್ತಿದರು. ಅಧ್ಯಾತ್ಮದ ಮೂಲಕ ಸಾಮಾಜಿಕ ಹೋರಾಟ ನಡೆಸಿದರು. ಸಾಮಾಜಿಕ ತಾರತಮ್ಯ ತೊಡೆದು ಹಾಕಿ ಕ್ರಾಂತಿ ಸೃಷ್ಟಿಸಿದರು. ಅಲ್ಲದೇ, ಜಾತ್ಯಾತೀತ ತತ್ವದ ಮೂಲಕ ಮಾನವೀಯ ಧರ್ಮ ಬೋಧಿಸಿದರು. ಅವರ ಚಿಂತನೆ ಸಮಾಜಕ್ಕೆ ದಾರಿದೀಪ’ ಎಂದು ಅಭಿಪ್ರಾಯಪಟ್ಟರು.
‘ಅಂಬೇಡ್ಕರ್ ಅವರು ದಲಿತ ಮತ್ತು ಹಿಂದುಳಿದ ವರ್ಗಗಳ ಪರ ಹೋರಾಟ ಮಾಡಿದರು. ನಾರಾಯಣಗುರು ಅವರು ಕೇರಳದಲ್ಲಿ ಅಧ್ಯಾತ್ಮದ ಮೂಲಕ ಜನ ಜಾಗೃತಿ ಮೂಡಿಸಿದರು’ ಎಂದು ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಗಿರೀಶ್ ತಿಳಿಸಿದರು.
ಈಡಿಗ ಸಮುದಾಯದ ವಿದ್ಯಾರ್ಥಿನಿಲಯ ಮತ್ತು ಸಮುದಾಯ ಭವನಕ್ಕೆ ಜಮೀನು ಮಂಜೂರು ಮಾಡುವಂತೆ ಸಂಘದ ಸದಸ್ಯರು ಮನವಿ ಮಾಡಿದರು. ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಯುವರಾಜ್, ಉಪಾಧ್ಯಕ್ಷ ಸೀನಪ್ಪ, ಖಜಾಂಚಿ ಸಂಜೀವಪ್ಪ, ಸದಸ್ಯರಾದ ಹರೀಶ್, ರಾಜೇಂದ್ರ ಪಾಲ್ಗೊಂಡರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.