ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ

ಕೋಲಾರ: ‘ಅಭಿವೃದ್ಧಿ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು, ಸಮಸ್ಯೆಗಳು ಇದ್ದಲ್ಲಿ ತಮ್ಮ ಗಮನಕ್ಕೆ ತಂದರೆ ಕೂಡಲೇ ಬಗೆಹರಿಸಿಕೊಡಲಾಗುವುದು’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ‘ಸತತ ಹತ್ತು ವರ್ಷಗಳಿಂದ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಎದುರಾಗಿವೆ. ಅದನ್ನು ಬಗೆಹರಿಸುವಲ್ಲಿ ಹಿಂದಿನ ಶಾಸಕರು ವಿಫಲರಾಗಿದ್ದು, ಜನ ನನಗೆ ನೀಡಿರುವ ಅವಕಾಶದಿಂದ ಪರಿಹಾರ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.
‘ಚುನಾವಣೆಯಲ್ಲಿ ನನಗೆ ಪಕ್ಷ ಭೇದವಿಲ್ಲದೆ ಎಲ್ಲರೂ ಮತಕೊಟ್ಟಿದ್ದೀರಿ ಅದಕ್ಕಾಗಿ ನಮಗೆ ರಾಜಕೀಯ ಬೇಡ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಂದೇ. ಗ್ರಾಮೀಣ ಭಾಗದಲ್ಲಿ ಸಾಮರಸ್ಯ ವಾತಾವರಣ ಇರಬೇಕು. ಅದನ್ನು ರಾಜಕೀಯ ಕಾರಣಕ್ಕಾಗಿ ಯಾವುದೇ ಸಂದರ್ಭದಲ್ಲಿ ಕೆಡಿಸಬಾರದು’ ಎಂದು ಎಚ್ಚರಿಸಿದರು.
‘ಹಿಂದೆ ಇದ್ದವರು ಹಳ್ಳಿಗಳಲ್ಲಿ ಎರಡು ಗುಂಪುಗಳನ್ನು ಮಾಡಿ ಹೋಗಿದ್ದರು, ಅವರಿಗೆ ರಾಜಕಾರಣ ಮಾಡಬೇಕು ಆದರೆ ನಾನು ಅಂತವನಲ್ಲ, ರಾಜಕೀಯಕ್ಕಾಗಿ ಜನರ ನಡುವೆ ವಿಷ ಬೀಜ ಬಿತ್ತುವ ವ್ಯಕ್ತಿ ನಾನಲ್ಲ, ರಾಜಕೀಯಕ್ಕಾಗಿ ಹಳ್ಳಿಗಳಲ್ಲಿ ಸೌಹಾರ್ದ ವಾತಾವರಣ ಕೆಡಿಸುವ ಪ್ರಯತ್ನ ಮಾಡಲ್ಲ’ ಎಂದರು.
‘ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿಗಳಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ನಾನು ಕ್ಷೇತ್ರದಲ್ಲಿ ಓಡಾಡುತ್ತಿದ್ದು, ಕೆಲ ರಸ್ತೆಗಳು ನಿರ್ಮಾಣದ ತಿಂಗಳಲೇ ಕಿತ್ತು ಹಾಳಾಗಿವೆ. ಕಳಪೆ ಕಾಮಗಾರಿಯನ್ನು ನಾನು ಸಹಿಸುವುದಿಲ್ಲ, ಗ್ರಾಮಸ್ಥರು ಕಾಮಗಾರಿ ಜಾಗಕ್ಕೆ ಭೇಟಿ ನೀಡಿ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು’ ಎಂದು ಸಲಹೆ ನೀಡಿದರು.
‘ಕುಡಿಯುವ ನೀರಿನ ಸಮಸ್ಯೆ ಎಲ್ಲಿಯೇ ಇದ್ದರೂ ಅದನ್ನು ಬಗೆಹರಿಸಲಾಗುವುದು. ಏನೇ ಸಮಸ್ಯೆ ಇದ್ದರೂ ನಾನು ಅದನ್ನು ಬಗೆಹರಿಸುತ್ತೇನೆ. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ನೀರಿನ ಸಮಸ್ಯೆ ಇರುವ ಕಡೆ ತಕ್ಷಣಕ್ಕೆ ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡಲು ಹೇಳಲಾಗಿದೆ. ಕೊಳವೆಬಾವಿ ಕೊರಸಿದರೆ ನೀರು ಲಭ್ಯವಾಗುವುದು ಅನುಮಾನವಿದ್ದು, ರೈತರಿಂದ ನೀರನ್ನು ಖರೀದಿಸಿ ಕೊಡಲಾಗುವುದು, ಇದಕ್ಕೆ ರೈತರು ಸಹಕರಿಸಬೇಕು’ ಎಂದು ಕೋರಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಮುಖಂಡರಾದ ಬಿಡಪ್ಪಗೌಡ, ಆನಂದ್, ಚಂದ್ರೇಗೌಡ, ನಂಜುಂಡಗೌಡ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಾಬು ಮೌನಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.