ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ರಾಜಕಾಣದಲ್ಲಿ ಆಸಕ್ತಿ ಇಲ್ಲ, ಪ್ರಚಾರದಲ್ಲೂ ಪಾಲ್ಗೊಳ್ಳಲ್ಲ: ವಿ.ಆರ್‌. ಸುದರ್ಶನ್‌

ಕಾಂಗ್ರೆಸ್‍ಗೆ ಮತ ನೀಡಲು ಮನವಿ ಮಾಡುವೆ–ಪ್ರಚಾರದಲ್ಲೂ ಪಾಲ್ಗೊಳ್ಳಲ್ಲ‌: ವಿ.ಆರ್‌.ಸುದರ್ಶನ್‌
Published 24 ಏಪ್ರಿಲ್ 2023, 16:14 IST
Last Updated 24 ಏಪ್ರಿಲ್ 2023, 16:14 IST
ಅಕ್ಷರ ಗಾತ್ರ

ಕೋಲಾರ: ‘ಜಿಲ್ಲೆಯ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ. ಇಲ್ಲಿ ನಾನು ಪ್ರಚಾರದಲ್ಲೂ ಪಾಲ್ಗೊಳ್ಳುವುದಿಲ್ಲ. ಆದರೆ, ಜವಾಬ್ದಾರಿಯುತ ಮತದಾರನಾಗಿ ರಾಜ್ಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಲು ಮನವಿ ಮಾಡುತ್ತೇನೆ’ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ವೈಯಕ್ತಿಕ ಅಭಿಪ್ರಾಯ ಮತ್ತು ಹಿತಾಸಕ್ತಿಗಿಂತ ರಾಜ್ಯದ ಹಿತ ಮುಖ್ಯ. ಹೀಗಾಗಿ, ಕಾಂಗ್ರೆಸ್‍ಗೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ರಾಜ್ಯದ ಬೇರೆ ಕಡೆ ಪ್ರಚಾರಕ್ಕೆ ಪಕ್ಷ ಕರೆದರೆ ಹೋಗುವ ಕುರಿತು ಆಲೋಚನೆ ಮಾಡುತ್ತೇನೆ’ ಎಂದರು.

ಕೋಲಾರದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳದಿರಲು ಕಾರಣವೇನು ಎಂಬುದಕ್ಕೆ, ‘ಈಗ ಹೇಳಲು ಸಕಾಲವಲ್ಲ. ಗೊಂದಲ ಸೃಷ್ಟಿಸಲು ನಾನು ಸಿದ್ಧನಿಲ್ಲ. ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸುವುದಿಲ್ಲವೆಂದರೆ ಸ್ಥಳೀಯರಿಗೆ ಅವಕಾಶ ನೀಡಬೇಕೆಂದು ಮನವಿ ಮಾಡಿದ್ದೆ. ಈಗ ಅದೆಲ್ಲಾ ಅಪ್ರಸ್ತುತ. ಕೊತ್ತೂರು ಮಂಜುನಾಥ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಅವರು ಹಿಂದೆ ಮುಳಬಾಗಿಲು ಶಾಸಕರಾಗಿದ್ದರು. ಅವರಿಗೆ ಮತ ನೀಡಿ ಎಂದಷ್ಟೇ ಜನತೆಗೆ ಮನವಿ ಮಾಡುವೆ. ಪ್ರಚಾರ ನಡೆಸಲ್ಲ’ ಎಂದು ಪ್ರತಿಕ್ರಿಯಿಸಿದರು.

‘ವಿಧಾನಸಭಾ ಚುನಾವಣೆಗೆ ಮೋದಿ ಮೇನಿಯಾ ನಡೆಯುವುದಿಲ್ಲ. ಆದರೆ, ಲೋಕಸಭಾ ಚುನಾವಣೆಗೆ ಏನಾಗಲಿದೆ ಎಂಬುದು ಗೊತ್ತಿಲ್ಲ. ರಾಜ್ಯ, ಕೇಂದ್ರದಲ್ಲಿ ಡಬಲ್ ಎಂಜಿನ್ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲವಾಗಿದೆ. ರಾಹುಲ್‍ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ನೂರೆಂಟು ಅವಾಂತರಗಳ ಬಿಜೆಪಿ ಸರ್ಕಾರ ಬದಲಾವಣೆ ಮಾಡಲು ಜನ ಬಯಸಿದ್ದಾರೆ’ ಎಂದರು.

‘ನಾನು 2013ರ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೆ.‌ 2018ರ ಚುನಾವಣೆಯಲ್ಲಿ ಕೋಲಾರ ಆಕಾಂಕ್ಷಿಯಾಗಿದ್ದೆ. ಈ ಬಾರಿ ಸಿದ್ದರಾಮಯ್ಯ ಬರುವುದಾಗಿ ತಿಳಿಸಿದ ಮೇಲೆ ನಾನು ಆಕಾಂಕ್ಷಿ ಎಂದು ಹೇಳಲಿಲ್ಲ, ಸಿದ್ಧತೆಯೂ ಮಾಡಿಕೊಳ್ಳಲಿಲ್ಲ. ಆದರೆ, ನಾನು ಶಾಸನ ಸಭೆಗೆ ಬರಬೇಕು ಎಂಬುದು ನನ್ನ ಬೆಂಬಲಿಗರ ಮತ್ತು ಜನರ ಒತ್ತಾಯವಾಗಿತ್ತು’ ಎಂದು ನುಡಿದರು.

‘ಸಕ್ರಿಯ ರಾಜಕಾರಣದಿಂದ ದೂರವಾಗುವೆ ಎಂದು ಹೇಳಿದ್ದರೂ ನಿವೃತ್ತಿ ಘೋಷಣೆ ಎಂಬ ತಪ್ಪು ಅರ್ಥ ಬಂದಿದ್ದರಿಂದ ನಾಯಕರಾದ ರಣದೀಪ್‌ ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಂ.ಎಲ್‌.ಅನಿಲ್‍ ಕುಮಾರ್ ಮತ್ತಿತರರು ದೂರವಾಣಿಯಲ್ಲಿ ಮಾತನಾಡಿ, ರಾಜಕಾರಣದಲ್ಲಿ ಸಕ್ರಿಯವಾಗಿರಲು ಕೋರಿದರು. ಪಕ್ಷದ ಅಭಿವೃದ್ದಿಗೆ ಅನುಭವ ಹಂಚಿ ಎಂದು ಸಲಹೆ ನೀಡಿದರು’ ಎಂದರು.

ಸುದ್ದಿಗೋಷ್ಠಿಯಲ್ಲಿ ಎಂಟಿಬಿ ಶ್ರೀನಿವಾಸ್, ಅಲ್ತಾಫ್, ಪ್ರವೀಣ್, ವಕೀಲ ವೆಂಕಟೇಶಗೌಡ, ವಿ.ಮುನಿವೆಂಕಟೇಶಪ್ಪ, ಈಡಿಗರ ರವಿಚಂದ್ರ, ಶಶಿಕುಮಾರ್, ನಾಗೇಶ್, ಆರಿಫ್‍ಉಲ್ಲಾ ಖಾನ್, ನಿವೃತ್ತ ಬ್ಯಾಂಕ್ ಮ್ಯಾನೇಜರ್ ರಾಧಾಕೃಷ್ಣ, ಸಿಂಗಹಳ್ಳಿ ಕೃಷ್ಣಪ್ಪ, ಕುರುಬರಪೇಟೆ ನಾರಾಯಣಸ್ವಾಮಿ ಇದ್ದರು.

ನಾನು ಚುನಾವಣಾ ರಾಜಕಾರಣದಿಂದ ಮಾತ್ರ ದೂರವಿರುತ್ತೇವೆ. ಜನಪರ ಹೋರಾಟ ಅಭಿವೃದ್ಧಿಪರ ಚಟುವಟಿಕೆಗಳಲ್ಲಿ ಸಾರ್ವಜನಿಕ ಮಹತ್ವವಿರುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿರುವೆ.
ವಿ.ಆರ್‌.ಸುದರ್ಶನ್‌ ವಿಧಾನ ಪರಿಷತ್‌ ಮಾಜಿ ಸಭಾಪತಿ

‘ಕೋಲಾರ ಜನರಲ್ಲಿ ಕ್ಷಮೆ ಕೋರುವೆ’

‘ಸಿದ್ದರಾಮಯ್ಯ ಕೋಲಾರಕ್ಕೆ ಬಂದರೆ ಇಲ್ಲಿನ ಅಭಿವೃದ್ಧಿ ಸಾಧ್ಯವೆಂದು ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ ತಯಾರಿಸಿದ್ದೆ. ಅವರನ್ನು ಆಹ್ವಾನಿಸಿ ಮೊದಲು ಪತ್ರ ಬರೆದಿದ್ದವನೇ ನಾನು. ಅವರ ರಾಜಕೀಯ ಅನುಭವ ಬಳಸಿ ಜಿಲ್ಲೆ ಅಭಿವೃದ್ಧಿಗೆ ಸಾಕಾರ ನೀಡಬಹುದು ಎಂದು ಭಾವಿಸಿದ್ದೆ. ಜನರ ಆಶಯವೂ ಆದೇ ಆಗಿತ್ತು’ ಎಂದು ಸುದರ್ಶನ್‌ ತಿಳಿಸಿದರು. ‘ಸಿದ್ದರಾಮಯ್ಯ ಬಂದಿದ್ದರೆ 25 ಸಾವಿರ ಮತಗಳಿಂದ ಗೆಲ್ಲುತ್ತಿದ್ದರು. ಆದರೆ ಅವರು ಬಾರದೆ ಮತದಾರರಿಗೆ ನಿರಾಸೆಯಾಗಿದೆ. ಅದಕ್ಕಾಗಿ ನಾನು ಕೋಲಾರ ಕ್ಷೇತ್ರದ ಜನರ ಕ್ಷಮೆ ಕೋರುವೆ’ ಎಂದರು. ‘ಈ ರೀತಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮುಂದೆ ಮರುಕಳಿಸದಂತೆ ಪಕ್ಷ ಎಚ್ಚರ ವಹಿಸಬೇಕು. ಇಂತಹ ನಿಲುವು ತೆಗೆದುಕೊಳ್ಳುವಾಗ‌ ನಾವೂ ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ಗೆ ಅಧಿಕಾರ–ವಿಶ್ವಾಸ

‘ದೇವರಾಜ ಅರಸು ರಾಮಕೃಷ್ಣ ಹೆಗಡೆ ಸರ್ಕಾರದ ಬಳಿಕ ಯಾರಿಗೂ ಸತತ ಎರಡನೇ ಬಾರಿ ಅಧಿಕಾರ ರಚಿಸುವ ಅವಕಾಶ ಸಿಗಲಿಲ್ಲ. ಹೆಗಡೆ ನಂತರ ಯಾವುದೇ ಮುಖ್ಯಮಂತ್ರಿಗೂ ಎರಡನೇ ಬಾರಿ ಜನರು ಆಶೀರ್ವಾದ ಮಾಡಿಲ್ಲ. ಎಸ್‌.ಎಂ.ಕೃಷ್ಣ ಸಿದ್ದರಾಮಯ್ಯ ಅವರಿಗೆ ಅವಕಾಶ ಇತ್ತಾದರೂ ಸಾಧ್ಯವಾಗಲಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದೆ’ ಎಂದು ಸುದರ್ಶನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT