ಕೋಲಾರ: ಇಲ್ಲಿನ ಎಸ್ಡಿಸಿ ಕಾಲೇಜಿನಲ್ಲಿ ಬುಧವಾರ ‘ಪಾಪು ಬಾಪು ಗಾಂಧಿ’ ನಾಟಕ ಪ್ರದರ್ಶನ ನಡೆಯಿತು.
‘ಗಾಂಧಿ 150 ಒಂದು ರಂಗಪಯಣ’ ಎಂಬ ಕಾರ್ಯಕ್ರಮವನ್ನು ಶಿವಮೊಗ್ಗರಂಗಾಯಣ ಸಂಸ್ಥೆ ತಂಡದ ಕಲಾವಿದರು ನಾಟಕ ಪ್ರದರ್ಶನ ಮಾಡಿದರು.
ಮಕ್ಕಳಲ್ಲಿ ಗಾಂಧೀಜಿ ಅವರ ವಿಚಾರಧಾರೆ, ತತ್ವಾದರ್ಶಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ರೂಪಿಸಿದ ಒಂದು ಗಂಟೆ ಹತ್ತು ನಿಮಿಷದ ನಾಟಕವನ್ನು ರಂಗಯಾತ್ರೆಯ ಪ್ರಧಾನ ಸಂಚಾಲಕ ಶ್ರೀಪಾದಭಟ್ ಅವರು ನಿರ್ದೇಶಿಸಿದ್ದು, ಕಲಾವಿದರು ನಾಟಕ ಪ್ರದರ್ಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ ಮಾತನಾಡಿ, ‘ಅಹಿಂಸೆಯ ಮೂಲಕ ದೇಶವನ್ನು ಕಟ್ಟಿದ ಮಹಾತ್ಮಾ ಗಾಂಧೀಜಿ ಅವರ ಬದುಕು ಮತ್ತು ಚಿಂತನೆ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಳ್ಳುವ ಅಗತ್ಯವಿದೆ’ ಎಂದು
‘ಮಹಾತ್ಮ ಗಾಂಧೀಜಿ ಅವರ ನಡೆಯನ್ನು ಶ್ರಶ್ನಿಸುತ್ತಿರುವುದು ಮತ್ತು ಸ್ವಾತಂತ್ರ್ಯಗೋಸ್ಕರ ಹೋರಾಟ ಮಾಡಿರುವವರನ್ನು ಪ್ರಶ್ನಿಸುತ್ತಿರುವುದು ವಿಕೃತ ಮನಸ್ಸುಗಳ ರೀತಿ ಏನು ಎಂಬುದನ್ನು ನಾಟಕ ತೋರಿಸುತ್ತಿದೆ’ ಎಂದು ತಿಳಿಸಿದರು.
‘ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವವರನ್ನು ಗೌರವಿಸುವುದು ಆದ್ಯ ಕರ್ತವ್ಯ. ಗಾಂಧೀಜಿಯ ಅಹಿಂಸಾತ್ಮಕ ಹೋರಾಟಗಳು ಸತ್ಯಾಗ್ರಹಗಳು ಇಂದಿನ ಭಾರತಕ್ಕೆ ತುಂಬಾ ಅನಿವಾರ್ಯವಾಗಿರುವ ಅಂತಹ ಸಂದರ್ಭದಲ್ಲಿ ಅಂತಹ ಮಹಾನ್ ವ್ಯಕ್ತಿಯ ನಡೆಯನ್ನು ಪ್ರಶ್ನಿಸುವುದು ಅಕ್ಷಮ್ಯ ಅಪರಾಧ’ ಎಂದು ಹೇಳಿದರು.
ಎಸ್ಡಿಸಿ ಕಾಲೇಜಿನ ಪ್ರಾಂಶುಪಾಲೆ ಕೆ.ಪುಷ್ಪಲತಾ, ನಾಟಕದ ಸಹ ಸಂಚಾಲಕರಾದ ನಾರಾಯಣಸ್ವಾಮಿ, ಉಪನ್ಯಾಸಕರಾದ ಜಿ.ಸದಾಶಿವ, ವಿ.ಎನ್.ಮಂಜುಳಾ ಹಾಜರಿದ್ದರು.