ಮುಳಬಾಗಿಲು: ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ಮಾಸಾಶನ ತಲುಪದೆ ಪರದಾಡುವಂತಾಗಿದೆ.
ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯದ ಪರಿಣಾಮ ತಾಲ್ಲೂಕಿನಲ್ಲಿ 6,887 ಫಲಾನುಭವಿಗಳ ಮಾಹಿ ತಿ ನಿಷ್ಕ್ರಿಯಗೊಂಡಿರುವುದರಿಂದ ಫೆಬ್ರುವರಿ ತಿಂಗಳಿಂದ 42,650 ಫಲಾನುಭವಿಗಳಲ್ಲಿ 6,887 ಫಲಾನುಭವಿಗಳು ಪ್ರತಿದಿನ ಅಂಚೆ ಕಚೇರಿ, ಬ್ಯಾಂಕ್ಗಳಿಗೆ ಸುತ್ತುವಂತಾಗಿದೆ.
ಫಲಾನುಭವಿಗಳ ಆಧಾರ್ ಲಿಂಕ್, ಬಯೋಮೆಟ್ರಿಕ್ ಒಂದು ಸಮಸ್ಯೆಯಾದರೆ, ಬ್ಯಾಂಕ್ ಮತ್ತು ಅಂಚೆ ಕಚೇರಿಯ ಖಾತೆ ನಿಷ್ಕ್ರೀಯವಾಗಿರುವುದು ಮತ್ತೊಂದು ಸಮಸ್ಯೆಯಾಗಿದೆ. ಖಜಾನೆಯಲ್ಲಿ ಕೆ-2 ತಂತ್ರಾಂಶಕ್ಕೆ ಡೇಟಾ ಉನ್ನತೀಕರಣ ಸಂದರ್ಭದಲ್ಲಿ ಸಮಸ್ಯೆಯಲ್ಲಾದ ತಂತ್ರಾಶ ಸಮಸ್ಯೆಗಳ ಕಾರಣ ಕೆಲವೊಂದು ಫಲಾನುಭವಿಗಳಿಗೆ ಮಾಸಾಶನವಿಲ್ಲವಾಗಿದೆ.
ಮುಳಬಾಗಿಲು ನಗರದಲ್ಲಿ 1,159, ಕಸಬಾ ಹೋಬಳಿಯಲ್ಲಿ 787, ತಾಯಲೂರು ಹೋಬಳಿಯಲ್ಲಿ 1,282, ದುಗ್ಗಸಂದ್ರ ಹೋಬಳಿಯಲ್ಲಿ 927, ಆವಣಿ ಹೋಬಳಿಯಲ್ಲಿ 1,120, ಬೈರಕೂರು ಹೋಬಳಿಯಲ್ಲಿ 1,159 ಒಟ್ಟು 6887 ಫಲಾನುಭವಿಗಳ ಖಾತೆ ನಿಷ್ಕ್ರಿಯವಾಗಿರುವುದರಿಂದ ಸಾಮಾಜಿಕ ಭದ್ರತಾ ಯೋಜನೆಯ ಹಣ ಕೈಸೇರದಂತಾಗಿದೆ.
ಜಿ.ಪಂ ಸದಸ್ಯ ಉತ್ತನೂರು ಅರವಿಂದ್ ಮಾತನಾಡಿ, ಕಳೆದ ಮೂರು ನಾಲ್ಕು ತಿಂಗಳಿಂದ ಮಾಸಾಶನ ಸಮಸ್ಯೆ ಇರುವ ಬಗ್ಗೆ ಫಲಾನುಭವಿಗಳು ದೂರುತ್ತಿದ್ದಾರೆ. ಆಧಾರ್ ಲಿಂಕ್ ಮತ್ತಿತರ ಸಮಸ್ಯೆಗಳನ್ನು ಕಂದಾಯ ಇಲಾಖೆ ಸರಿಪಡಿಸಬೇಕು ಎಂದರು.
ಕಸಬಾ ಹೋಬಳಿ ನರಸೀಪುರದಿನ್ನೇ ರೈತ ರಾಮ್ಸಿಂಗ್ ಮತ್ತು ದೊಡ್ಡಬಂಡಹಳ್ಳಿ ಗ್ರಾಮದ ನಾರಾಯಣಪ್ಪ ಮಾತನಾಡಿ, ‘ತಾವು ಕೃಷಿಕರಾಗಿದ್ದು ಬೆಳೆದ ಬೆಳೆಗೆ ಬೆಲೆ ಸಿಗದೆ ಸಂಕಷ್ಟದಲ್ಲಿದ್ದೇವೆ. 65 ವರ್ಷವಾದ ತಮಗೆ ಕಂದಾಯ ಇಲಾಖೆ ಗ್ರಾಮಲೆಕ್ಕಿಗರು ಮನೆ ಬಳಿಗೆ ಬಂದು ಸಂಧ್ಯಾಸುರಕ್ಷ ವೇತನ ಕೊಡಿಸಿದ್ದರು. ಇದೀಗ ಪಿಂಚಣಿಬರುತ್ತಿಲ್ಲ’ ಎಂದರು.