ಮುಳಬಾಗಿಲು: ‘ಯಾವುದೇ ಒಂದು ಸಂಘಟನೆ ಸ್ಥಾಪನೆಯಾದರೆ ಅದರಿಂದ ಸಮಾಜದಲ್ಲಿ ಒಳ್ಳೆಯ ಕೆಲಸಗಳು ನಡೆದಾಗ ಮಾತ್ರ ಆ ಸಂಘಟನೆಯು ಸಾರ್ಥಕತೆ ಪಡೆದುಕೊಳ್ಳುತ್ತದೆ’ ಎಂದು ಕನಕ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಆರ್. ವೆಂಕಟೇಶಪ್ಪ ಹೇಳಿದರು.
ನಗರದ ಕುರುಬರಪೇಟೆಯ ಕನಕ ಭವನದಲ್ಲಿ ಎಸ್.ಜಿ ಫ್ರೆಶ್ ಚಿಕನ್ ಮಾರಾಟ ಮಳಿಗೆಯಿಂದ ಕನಕ ನೌಕರರ ಸಂಘದ 2021ನೇ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘಟನೆ ಸ್ಥಾಪನೆಯಿಂದ ಅಧಿಕಾರ ಸಿಗಬಹುದು. ಆದರೆ, ಆ ಅಧಿಕಾರವನ್ನು ಸಮಾಜದ ಉದ್ಧಾರಕ್ಕಾಗಿ ಬಳಕೆ ಮಾಡಿದಾಗ ಮಾತ್ರ ಅಂತಹ ಸಂಘಟನೆ ಉತ್ತಮ ಹೆಸರು ಗಳಿಸಲು ಸಾಧ್ಯ ಎಂದರು.
ಕನಕ ನೌಕರರ ಸಂಘವು ತಾಲ್ಲೂಕಿನಾದ್ಯಂತ ತನ್ನದೇ ಆದ ರೀತಿಯಲ್ಲಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಸಾಕಷ್ಟು ಕಾರ್ಯಕ್ರಮಗಳು ಯಶಸ್ಸು ಕಾಣಲು ಸಂಘದ ಪದಾಧಿಕಾರಿಗಳ ಶ್ರಮ ತುಂಬಾ ಇದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ಸಂಘ ಇದೇ ರೀತಿ ಮುಂದುವರಿದು ಮುಂದಿನ ತಲೆಮಾರಿನವರಿಗೆ ಒಳ್ಳೆಯ ಮಾರ್ಗದರ್ಶನ ನೀಡಬೇಕು. ಇದಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಕೋರಿದರು.
ಕನಕ ನೌಕರರ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಂ. ಶಂಕರಪ್ಪ, ಖಜಾಂಚಿ ಲೋಕೇಶ್, ಆದಿನಾರಾಯಣ, ಸುಬ್ರಮಣಿ, ಮಂಜುನಾಥ್, ರಂಗಣ್ಣ, ನಾರಾಯಣಸ್ವಾಮಿ, ಅಯ್ಯಪ್ಪ, ಚಂದ್ರಶೇಖರ್ ಇದ್ದರು.