ಕೆಜಿಎಫ್: ‘ಮೊಬೈಲ್ ಮತ್ತಿತರ ಉಪಕರಣಗಳನ್ನು ಹೊಂದಿರುವ ವಿದ್ಯಾರ್ಥಿಗಳು ಭ್ರಷ್ಟಾಚಾರದ ಬಗ್ಗೆ ಸುಳಿವು ಸಿಕ್ಕಿದರೆ ವಿಡಿಯೊ ಮಾಡಿ ಎಸಿಬಿಗೆ ದೂರು ಸಲ್ಲಿಸಬಹುದು’ ಎಂದು ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಎಂ.ಎಲ್. ಪುರುಷೋತ್ತಮ ಹೇಳಿದರು.
ರಾಬರ್ಟಸನ್ಪೇಟೆಯಲ್ಲಿ ಮಂಗಳ ವಾರ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
‘ನಮ್ಮ ಸುತ್ತಮುತ್ತಲಿನ ಸರ್ಕಾರಿ ನೌಕರರು ಮಾಡುವ ಭ್ರಷ್ಟಾಚಾರ ವಿದ್ಯಾರ್ಥಿಗಳ ಕಣ್ಣಿಗೆ ಕಾಣಬಹುದು. ಭ್ರಷ್ಟಾಚಾರಕ್ಕೆ ಸಣ್ಣದು ಅಥವಾ ದೊಡ್ಡದು ಎಂಬ ಭೇದವಿಲ್ಲ. ಅವುಗಳನ್ನು ದಾಖಲಿಸಿ ಎಸಿಬಿಗೆ ದೂರು ನೀಡಬೇಕು. ಇತರರನ್ನು ದೂರು ನೀಡುವಂತೆ ಪ್ರೇರೇಪಿಸಬೇಕು. ಇದು ನಮ್ಮ ಹಕ್ಕು ಎಂದು ಭಾವಿಸಬೇಕು’ ಎಂದು ಹೇಳಿದರು.
ಮಸ್ಕಂನ ಗ್ರಾಮಸ್ಥ ಷಣ್ಮುಗಂ ಮಾತನಾಡಿ, ‘ಗೌಡನ ಕೆರೆಯನ್ನು ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ. ಸಾಕಷ್ಟು ಬಾರಿ ಸರ್ಕಾರದ ಅನೇಕ ಇಲಾಖೆಗಳಿಗೆ ಮತ್ತು ಎಸಿಬಿಗೆ ಸಹ ದೂರು ಸಲ್ಲಿಸಲಾಗಿದೆ. ಇದುವರೆವಿಗೂ ಕೆರೆ ಅಭಿವೃದ್ಧಿ ಮಾಡಲು, ಒತ್ತುವರಿ ತೆರವು ಮಾಡಿಸಲು ಸಾಧ್ಯವಾಗಿಲ್ಲ’ ಎಂದರು.
‘ಮಾರಿಕುಪ್ಪಂ ಗ್ರಾಮ ಪಂಚಾಯಿತಿಯ ಎಂ. ಕೊತ್ತೂರು ಗ್ರಾಮದ ಸರ್ವೇ ನಂ. 8ರಲ್ಲಿ 1.06 ಎಕರೆ ವಿಸ್ತೀರ್ಣದ ಕೆರೆ ಇದೆ. ಹಲವಾರು ದಶಕಗಳಿಂದ ಜನತೆಗೆ ನೀರುಣಿಸಿದ ಕೆರೆಯನ್ನು ಸುತ್ತಲೂ ಒತ್ತುವರಿ ಮಾಡಲಾಗುತ್ತಿದೆ’ ಎಂದು ಕೊತ್ತೂರು ಗ್ರಾಮದ ಬಾಬು ಹೇಳಿದರು.