ಮುಳಬಾಗಿಲು: ಪ್ರಥಮ ದರ್ಜೆ ವಸತಿ ಕಾಲೇಜು ಕಾಲೇಜು ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಿದ್ದರೂ ಇನ್ನೂ ವಿದ್ಯಾರ್ಥಿಗಳಿಗೆ ವಸತಿ ನಿಲಯ ಪ್ರಾರಂಭವಾಗದೆ ಇರುವುದರಿಂದ ಬಡ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಜುಲೈ 4ರಂದು ರಾಷ್ಟ್ರೀಯ ಹೆದ್ದಾರಿ ಮಲ್ಲಪ್ಪನಹಳ್ಳಿ ಗೇಟ್ ಬಂದ್ ಮಾಡಲಾಗುವುದು ಎಂದು ರೈತ ಸಂಘದ ಮುಖಂಡರು ತಿಳಿಸಿದರು.
ಮಲ್ಲಪ್ಪನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸರ್ಕಾರಿ ವಸತಿಯುಕ್ತ ಪ್ರಥಮ ದರ್ಜೇ ಕಾಲೇಜು ಕಾಮಗಾರಿಗಳು ಮುಗಿದು ವರ್ಷ ಕಳೆದಿದೆ. ಎರಡು ತಿಂಗಳ ಹಿಂದೆ ಕಾಲೇಜಿನಲ್ಲಿ ತರಗತಿಗಳು ಪ್ರಾರಂಭವಾಗಿವೆ. ಇನ್ನೂ ಹಾಸ್ಟೆಲ್ ಪ್ರಾರಂಭಗೊಳ್ಳದೆ ಇರುವುದರಿಂದ ಬಡ, ಕೂಲಿ ಕಾರ್ಮಿಕ ಹಾಗೂ ರೈತರ ಮಕ್ಕಳು ವಸತಿ ಮತ್ತು ಆಹಾರದಿಂದ ವಂಚಿತರಾಗಿದ್ದಾರೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ವಸತಿ ಯುಕ್ತ ಪದವಿ ಕಾಲೇಜು ಕಟ್ಟಡ ಸುಸಜ್ಜಿತವಾಗಿದ್ದು ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಆದರೆ ಸರ್ಕಾರವೇ ವಸತಿಯುಕ್ತ ಎಂದು ಘೋಷಣೆ ಮಾಡಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರಾರಂಭಿಸದೆ ಕೇವಲ ಶಿಕ್ಷಣ ಮಾತ್ರ ನೀಡಲಾಗುತ್ತಿದೆ. ವಸತಿಯುಕ್ತ ಕಾಲೇಜಿನಲ್ಲಿ ಸುಸಜ್ಜಿತವಾಗಿರುವ ಬಾಲಕರ ಮತ್ತು ಬಾಲಕಿಯರ ಹಾಸ್ಟೆಲನ್ನು ಕೂಡಲೇ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ಜುಲೈ 4 ರಂದು ಮಲ್ಲಪ್ಪನಹಳ್ಳಿ ರಸ್ತೆಯನ್ನು ಬಂದ್ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಪಾಷ ಮಾತನಾಡಿ, ಸಾವಿರಾರು ಕೋಟಿ ವೆಚ್ಚದಲ್ಲಿ ಪ್ರತಿ ತಿಂಗಳು ಉಚಿತ ಭಾಗ್ಯಗಳನ್ನು ನೀಡುವ ಸರ್ಕಾರಗಳಿಗೆ ಪದವಿ ಶಿಕ್ಷಣದ ಜತೆಗೆ ವಸತಿ ಮತ್ತು ಊಟವನ್ನು ವಿದ್ಯಾರ್ಥಿಗಳಿಗೆ ನೀಡುವುದನ್ನು ಮರೆತಂತಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗಾರಿ ಮಂಜು, ಯಲುವಳ್ಳಿ ಪ್ರಭಾಕರ್, ಸುನಿಲ್ ಕುಮಾರ್, ವಿಶ್ವ, ಭಾಸ್ಕರ್, ರಾಜೇಶ್, ಹೆಬ್ಬಣಿ ಆನಂದರೆಡ್ಡಿ, ವಿಜಯ್ಪಾಲ್, ಜುಬೇರ್ಪಾಷ, ಯಲ್ಲಪ್ಪ, ರಾಮಸಾಗರ ವೇಣು, ಸುರೇಶ್ಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.