ಮಾಲೂರು: ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವ ಉದ್ದೇಶದಿಂದ ಮೊದಲ ಬಾರಿಗೆ ಪುರಸಭೆ ಸಿಬ್ಬಂದಿ ಪ್ರತಿ ಅಂಗಡಿಗೂ ತೆರಳಿ ಮಾಲೀಕರಿಂದ ಪ್ಲಾಸ್ಟಿಕ್ ಬಳಕೆ ಮಾಡುವುದಿಲ್ಲ ಎಂದು ಸಹಿ ಸಂಗ್ರಹಿಸುವ ಕಾರ್ಯಕ್ರಮಕ್ಕೆ ಮಾರಿಕಾಂಬ ವೃತ್ತದಲ್ಲಿ ಗುರುವಾರ ಪುರಸಭೆ ಅಧ್ಯಕ್ಷ ಮುರಳೀಧರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಾವು ಪ್ರಬಲಗೊಳ್ಳಬೇಕಾದಲ್ಲಿ ಆಂತರಿಕವಾಗಿ ಪ್ರಬಲರಾಗಬೇಕು. ಪ್ಲಾಸ್ಟಿಕ್ ಬಹುದೊಡ್ಡ ಶತ್ರು. ನಮ್ಮ ಆರೋಗ್ಯ, ಪರಿಸರ, ಪಶು, ಪಕ್ಷಿಗಳಿಗೆ ಹಾನಿಕಾರಕ. ಅದರ ವಿರುದ್ಧ ಹೋರಾಡಲು ಪ್ರತಿಯೊಬ್ಬರು ವೈಯಕ್ತಿಕವಾಗಿ ಪ್ರಯತ್ನಪಡಬೇಕು. ಆಗ ಇದರ ನಿಯಂತ್ರಣ ಸಾಧ್ಯ ಎಂದರು.
ಮನೆಯಿಂದ ಹೊರಡುವಾಗಲೇ ಬಟ್ಟೆಚೀಲವನ್ನು ಕೈಯಲ್ಲಿ ಹಿಡಿದುಕೊಂಡು ಮಾರುಕಟ್ಟೆಗೆ ಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಸುವುದಿಲ್ಲ ಎನ್ನುವ ದೃಢ ನಿರ್ಧಾರ ಕೈಗೊಳ್ಳಬೇಕು. ಹೀಗೆ ಪ್ರತಿಯೊಬ್ಬರೂ ಪ್ರಯತ್ನ ಪಟ್ಟರೆ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯಬಾರದು. ಅದನ್ನು ಸಂಗ್ರಹಿಸಿ ಮರುಬಳಕೆ ಮಾಡುವ ಸಂಸ್ಥೆಗಳಿಗೆ ನೀಡಬೇಕು ಎಂದರು.
ಪುರಸಭೆ ಮುಖ್ಯಾಧಿಕಾರಿ ನಜೀರ್ ಅಹಮದ್, ಅಧಿಕಾರಿಗಳಾದ ಮಂಜುನಾಥ್, ವಿನೋದ್ ಮತ್ತು ಸಿಬ್ಬಂದಿ ಹಾಜರಿದ್ದರು.