ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಕೊಂಚ ತಗ್ಗಿದ ವರುಣ ದೇವನ ಆರ್ಭಟ

ಆಗೊಮ್ಮೆ ಈಗೊಮ್ಮೆ ನೇಸರನ ದರ್ಶನ: ತುಂತುರು ಮಳೆ
Last Updated 20 ನವೆಂಬರ್ 2021, 14:23 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬರಿದಿದ್ದ ವರುಣ ದೇವನ ಆರ್ಭಟ ಶನಿವಾರ ಕೊಂಚ ತಗ್ಗಿದ್ದು, ಆಗಸದಲ್ಲಿ ಆಗೊಮ್ಮೆ ಈಗೊಮ್ಮೆ ನೇಸರನ ದರ್ಶನವಾಯಿತು.

ಸತತ ಮಳೆಯ ಕಾರಣಕ್ಕೆ ಮನೆಯಲ್ಲೇ ಬಂಧಿಯಾಗಿದ್ದ ಜನರು ಶನಿವಾರ ಮನೆಗಳಿಂದ ಹೊರ ಬಂದು ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡರು. ದಿನಸಿ, ಹಾಲು, ತರಕಾರಿ ಸೇರಿದಂತೆ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.

ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣದ ನಡುವೆ ಮಧ್ಯಾಹ್ನದ ನಂತರ ತುಂತುರು ಮಳೆಯಾಯಿತು. ಸಂಜೆಯ ನಂತರ ಕೆಜಿಎಫ್‌, ಬಂಗಾರಪೇಟೆ ಮತ್ತು ಕೋಲಾರ ತಾಲ್ಲೂಕಿನಲ್ಲಿ ಮಳೆ ಸುರಿಯಿತು. ಮಾಲೂರು ತಾಲ್ಲೂಕಿನಲ್ಲಿ ಬೆಳಿಗ್ಗೆ ಜಡಿ ಮಳೆ ಸುರಿಯಿತು. ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲ್ಲೂಕಿನಲ್ಲಿ ತುಂತುರು ಮಳೆಯಾಯಿತು. ಕಳೆದ 2 ದಿನಗಳಿಗೆ ಹೋಲಿಸಿದರೆ ಮಳೆಯ ಪ್ರಮಾಣ ಕೊಂಚ ತಗ್ಗಿತು.

ಸತತ ಮಳೆಯಿಂದ ಅಸ್ತವ್ಯಸ್ತಗೊಂಡಿದ್ದ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಮಳೆ ಕಾರಣಕ್ಕೆ ಸ್ಥಗಿತಗೊಂಡಿದ್ದ ವಾಣಿಜ್ಯ ಚಟುವಟಿಕೆಗಳು ಪುನರಾರಂಭವಾದವು. ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಿನ ಹಾಜರಾತಿ ಕಂಡುಬಂತು. ಮಾರುಕಟ್ಟೆಗಳಲ್ಲಿ ದಿನನಿತ್ಯದಂತೆ ವಹಿವಾಟು ನಡೆಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ, ಕಾಲೇಜುಗಳಿಗೆ ರಜೆ ಮುಂದುವರಿಸಲಾಯಿತು. ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜಿನತ್ತ ಸುಳಿಯಲಿಲ್ಲ.

55 ಸಾವಿರ ಹೆಕ್ಟೇರ್‌ ಬೆಳೆ ನಷ್ಟ: ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ 48,439 ಹೆಕ್ಟೇರ್‌ ಕೃಷಿ ಬೆಳೆಗಳು ಹಾಗೂ 6,965 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳು ಹಾಳಾಗಿವೆ. ತೋಟಗಾರಿಕೆ ಬೆಳೆಗಳ ನಷ್ಟದ ಪ್ರಮಾಣ ಸುಮಾರು ₹ 36.18 ಕೋಟಿ ಎಂದು ಅಂದಾಜಿಸಲಾಗಿದೆ. ಕೃಷಿ ಬೆಳೆಗಳು ಸೇರಿದಂತೆ ₹ 50 ಕೋಟಿಗೂ ಹೆಚ್ಚಿನ ಬೆಳೆ ನಷ್ಟ ಸಂಭವಿಸಿದೆ.

ಪಪ್ಪಾಯ 53 ಹೆಕ್ಟೇರ್, ದಾಳಿಂಬೆ 1 ಹೆಕ್ಟೇರ್‌, ನುಗ್ಗೆಕಾಯಿ 31 ಹೆಕ್ಟೇರ್‌, ಟೊಮೆಟೊ 3,363 ಹೆಕ್ಟೇರ್‌, ಹಸಿರು ಮೆಣಸಿನ ಕಾಯಿ 33 ಹೆಕ್ಟೇರ್‌, ಎಲೆಕೋಸು 108 ಹೆಕ್ಟೇರ್‌, ಹೂಕೋಸು 102 ಹೆಕ್ಟೇರ್‌, ಬೀಟ್ರೂಟ್‌ 13 ಹೆಕ್ಟೇರ್‌, ದಪ್ಪ ಮೆಣಸಿನಕಾಯಿ 72 ಹೆಕ್ಟೇರ್‌, ಆಲೂಗಡ್ಡೆ 2,416 ಹೆಕ್ಟೇರ್‌, ಇತರೆ ತರಕಾರಿಗಳು 325 ಹೆಕ್ಟೇರ್‌, 448 ಹೆಕ್ಟೇರ್‌ ಹೂವಿನ ಬೆಳಗಳು ನಷ್ಟವಾಗಿವೆ.

ಕೋಲಾರ ತಾಲ್ಲೂಕಿನಲ್ಲಿ 15,081 ಹೆಕ್ಟೇರ್‌, ಮಾಲೂರು ತಾಲ್ಲೂಕಿನಲ್ಲಿ 9,539 ಹೆಕ್ಟೇರ್‌, ಬಂಗಾರಪೇಟೆ ತಾಲ್ಲೂಕಿನಲ್ಲಿ 9,828 ಹೆಕ್ಟೇರ್‌, ಕೆಜಿಎಫ್‌ ತಾಲ್ಲೂಕಿನಲ್ಲಿ 3,025 ಹೆಕ್ಟೇರ್‌, ಮುಳಬಾಗಿಲು ತಾಲ್ಲೂಕಿನಲ್ಲಿ 5,238 ಹೆಕ್ಟೇರ್‌ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 5,728 ಹೆಕ್ಟೇರ್‌ ಕೃಷಿ ಬೆಳೆಗಳಿಗೆ ಹಾನಿಯಾಗಿದೆ.

ಕೋಲಾರ ತಾಲ್ಲೂಕಿನಲ್ಲಿ 1,855 ಹೆಕ್ಟೇರ್‌, ಮಾಲೂರು ತಾಲ್ಲೂಕಿನಲ್ಲಿ 1,595 ಹೆಕ್ಟೇರ್‌, ಬಂಗಾರಪೇಟೆ ತಾಲ್ಲೂಕಿನಲ್ಲಿ 823 ಹೆಕ್ಟೇರ್‌, ಕೆಜಿಎಫ್‌ ತಾಲ್ಲೂಕಿನಲ್ಲಿ 666 ಹೆಕ್ಟೇರ್‌, ಮುಳಬಾಗಿಲು ತಾಲ್ಲೂಕಿನಲ್ಲಿ 1,362 ಹೆಕ್ಟೇರ್‌ ಹಾಗೂ ಶ್ರೀನಿವಾಸಪುರ ತಾಲ್ಲೂಕಿನಲ್ಲಿ 664 ಹೆಕ್ಟೇರ್‌ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ಮಳೆಯಿಂದ ಆಗಿರುವ ಬೆಳೆ ನಷ್ಟದ ಸಂಬಂಧ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಕೊಟ್ಟಿದ್ದಾರೆ. ಮಳೆ ಮುಂದುವರಿದಿದ್ದು, ಸಂ‍ಪೂರ್ಣವಾಗಿ ನಿಂತ ನಂತರ ಮತ್ತೊಮ್ಮೆ ಬೆಳೆ ನಷ್ಟದ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

658 ಮನೆ ಕುಸಿತ: 26 ಮಿ.ಮೀ ಮಳೆ: ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಶನಿವಾರ ಬೆಳಿಗ್ಗೆವರೆಗೆ 24 ತಾಸಿನಲ್ಲಿ 26 ಮಿಲಿ ಮೀಟರ್‌ ಮಳೆ ಸುರಿದಿದೆ. ಬಂಗಾರಪೇಟೆ ತಾಲ್ಲೂಕಿನಲ್ಲಿ 38 ಮಿ.ಮೀ, ಕೋಲಾರ ತಾಲ್ಲೂಕಿನಲ್ಲಿ 41, ಮಾಲೂರು ತಾಲ್ಲೂಕಿನಲ್ಲಿ 28, ಮುಳಬಾಗಿಲು ತಾಲ್ಲೂಕಿನಲ್ಲಿ 18, ಶ್ರೀನಿವಾಸಪುರ ತಾಲ್ಲೂಕಿನಲ್ಲಿ 8 ಹಾಗೂ ಕೆಜಿಎಫ್‌ ತಾಲ್ಲೂಕಿನಲ್ಲಿ 30 ಮಿ.ಮೀ ಮಳೆಯಾಗಿದೆ.

ಮಳೆಯಿಂದ ಜಿಲ್ಲೆಯ ವಿವಿಧೆಡೆ 2 ದಿನದಲ್ಲಿ 658 ಮನೆಗಳು ಕುಸಿದಿವೆ. 336 ಶಾಲೆಗಳಿಗೆ ಮತ್ತು 504 ಶಾಲಾ ಕೊಠಡಿಗಳಿಗೆ ಹಾನಿಯಾಗಿದೆ. ಅಲ್ಲದೇ, 10 ಶಾಲೆಗಳು ಮತ್ತು 15 ಶಾಲಾ ಕೊಠಡಿಗಳು ಸಂಪೂರ್ಣ ಕುಸಿದಿವೆ. ಜತೆಗೆ 341 ಶಾಲೆಗಳು ಹಾಗೂ 527 ಶಾಲಾ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT