ಮುಳಬಾಗಿಲು: ತಾಲ್ಲೂಕಿನ ಆವಣಿ ಹೋಬಳಿಯ ವಿರೂಪಾಕ್ಷಿ ಗ್ರಾಮದ ಪ್ರಸಿದ್ಧ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯದ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದ್ದು, ಬುಧವಾರ ಜಿಲ್ಲಾಧಿಕಾರಿ ಸೆಲ್ವಮಣಿ ಭೇಟಿ ನೀಡಿ ಪರಿಶೀಲಿಸಿದರು.
ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯ ಸುಮಾರು ಹತ್ತು ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ವಶದಲ್ಲಿದೆ. ದೇವಾಲಯದ ನಿರ್ವಹಣೆಯನ್ನು ರಾಜ್ಯ ಮುಜರಾಯಿ ಇಲಾಖೆ ನೋಡಿಕೊಳ್ಳುತ್ತದೆ.
ಪರಿಶೀಲನೆ ಬಳಿಕ ಜಿಲ್ಲಾಧಿಕಾರಿ ಅವರು ದೇಗುಲದ ಪ್ರಾಂಗಣದಲ್ಲಿ ತಾಲ್ಲೂಕು ಅಧಿಕಾರಿಗಳ ಸಭೆ ನಡೆಸಿದರು.
‘ಕಾಂಪೌಂಡ್ ಗೋಡೆಯನ್ನು ಶೀಘ್ರವೇ ದುರಸ್ತಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.
ತಹಶೀಲ್ದಾರ್ ಶೋಭಿತಾ, ಮುಖಂಡ ವರದಪ್ಪ, ವೆಂಕಟೇಶ್, ಸಿ. ಸುಬ್ರಮಣಿ ಹಾಜರಿದ್ದರು.