ಕೋಲಾರ: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿಆರ್ಡಬ್ಲ್ಯೂ ಮತ್ತು ಎಂಆರ್ಡಬ್ಲ್ಯೂ ಅಂಗವಿಕಲರ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಮುರಳಿ ಮಾತನಾಡಿ, ‘ಜಿಲ್ಲೆಯಲ್ಲಿ ೪೮,೦೦೦ಕ್ಕಿಂತ ಅಧಿಕ ಮಂದಿ ವಿಕಲಚೇತನರಿದ್ದಾರೆ. ಸರ್ಕಾರಿ ಯೋಜನೆಗಳನ್ನು ಕಟ್ಟಕಡೇಯ ವಿಕಲಚೇತನರಿಗೆ ತಲುಪಿಸುವಲ್ಲಿ ೧೧ ವರ್ಷಗಳಿಂದ ವಿಆರ್ಡಬ್ಲ್ಯೂ ಮತ್ತು ಎಂಆರ್ಡಬ್ಲ್ಯೂಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ನೀಡುತ್ತಿರುವ ವೇತನವನ್ನು ಕನಿಷ್ಠ ₨ 18 ಸಾವಿರಕ್ಕೆ ಏರಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.
‘ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗವಿಕಲರ ಹುದ್ದೆಯನ್ನು ಖಾಯಂಗೊಳಿಸಬೇಕು. ಅಂವಿಕಲರ ಪಿಂಚಣಿಯನ್ನು ₨ 5 ಸಾವಿರಕ್ಕೆ ಏರಿಕೆ ಮಾಡಬೇಕು. ಉಚಿತ ಬಸ್ ಪಾಸ್ ವಿತರಣೆ ಜತೆಗೆ ರಾಜ್ಯದಂದ್ಯ ಸರ್ಕಾರಿ ಬಸ್ನಲ್ಲಿ ಸಂಚರಿಸಲು ಅವಕಾಸ ಕಲ್ಪಿಸಬೇಕು. ಕೆಲಸ ನಿರ್ವಹಣೆ ಮಾಡುತ್ತಿರುವ ಅಂಗವಿಕಲರಿಗೆ ತ್ರಿಚಕ್ರ ವಾಹನ ನೀಡಬೇಕು. ಕೆಲಸದ ವೇಳೆ ಮರಣ ಹೊಂದಿದರೆ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
‘ಸರ್ಕಾರಿ ಇಲಾಖೆಗಳಲ್ಲಿ ಅಂಗವಿಕಲರಿಗೆ ಮೀಸಲಿರಿಸುತ್ತಿರುವ ಶೇ.೫ರರಷ್ಟು ಅನುದಾನ ಸಮರ್ಪಕವಾಗಿ ವೆಚ್ಚ ಮಾಡಬೇಕು. ಪ್ರತ್ಯೇಕ ಸಚಿವಾಲಯ ಮತ್ತು ಅಂಗವಿಕಲರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆದ್ಯತೆ ಮೇರೆಗೆ ಅಂಗವಿಕಲರಿಗೆ ಅವಕಾಶ ನೀಡಬೇಕು’ ಎಂದು ಕೋರಿದರು.
ಸಂಘದ ಸದಸ್ಯರಾದ ಜಮೀಲ್, ಫರ್ವೀಕ್ ಪಾಷ, ರವಿಕುಮಾರ್, ಶಾಂತಮ್ಮ, ಮಂಜುಳಾ, ಶ್ವೇತಾ, ಗೀತಮ್ಮ, ರೂಪ, ನಜೀರ್, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ರಾಜ್ಯಾಧ್ಯಕ್ಷ ಎನ್. ರಾಜೇಶ್ ಪಾಲ್ಗೊಂಡಿದ್ದರು.