ಕೋಲಾರ: ‘ಆರೋಗ್ಯಕ್ಕಿಂತ ಬೇರೆ ಭಾಗ್ಯವಿಲ್ಲ. ಮನುಷ್ಯ ಆರೋಗ್ಯವಂತನಾಗಿರಲು ಯೋಗ ಮುಖ್ಯ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ಕೊರೊನಾ ಸೋಂಕಿನ ಆತಂಕದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲೇ ಕುಟುಂಬ ಸದಸ್ಯರೊಂದಿಗೆ ಭಾನುವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಿದ ಅವರು, ‘ಇಂದಿನ ಒತ್ತಡದ ಬದುಕಿನಲ್ಲಿ ಯೋಗ ಅತ್ಯಗತ್ಯವಾಗಿದೆ. ರಕ್ತದೊತ್ತಡ ಮತ್ತು ಮಧುಮೇಹ ಸಮಸ್ಯೆ ಹೆಚ್ಚುತ್ತಿರುವುದರಿಂದ ಯೋಗ ಅತಿ ಮುಖ್ಯ’ ಎಂದು ತಿಳಿಸಿದರು.
‘ಈ ಹಿಂದೆ ಋಷಿಗಳು ಯೋಗಾಭ್ಯಾಸದಿಂದಲೇ ದೀರ್ಘ ಕಾಲ ಬದುಕುತ್ತಿದ್ದರು. ಮುನಿಗಳು ಆರೋಗ್ಯಕ್ಕಾಗಿ ಯೋಗದ ಮೊರೆ ಹೋಗುತ್ತಿದ್ದರು. ಕಾಲ ಬದಲಾದಂತೆ ಒತ್ತಡದ ಜೀವನ ಪದ್ಧತಿಯಿಂದ ದೈಹಿಕ ಏರುಪೇರುಗಳಾಗಿ ಮನುಷ್ಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಯೋಗಾಭ್ಯಾಸದಿಂದ ಅಂಗಾಂಗಗಳನ್ನು ನಿಯಂತ್ರಿಸುವ ಶಕ್ತಿ ಬರುತ್ತದೆ. ಪ್ರಾಣಾಯಾಮದಿಂದ ಉಸಿರಾಟದ ಸಮಸ್ಯೆ ಬಗೆಹರಿಯುತ್ತದೆ’ ಎಂದರು.
‘ನಾನು ಮನೆಯಲ್ಲಿ ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾನೆ. ಯೋಗದಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬಹುದು. ಜತೆಗೆ ಏಕಾಗ್ರತೆ ವೃದ್ಧಿಸುತ್ತದೆ. ಮಾನಸಿಕ ಶಾಂತಿ ಕಾಪಾಡಿಕೊಂಡು ಯಾವುದೇ ರೋಗ ಸುಳಿಯದಂತೆ ನಿಯಂತ್ರಿಸಬಹುದು’ ಎಂದು ಸಲಹೆ ನೀಡಿದರು.
ಸಾಮೂಹಿಕ ಯೋಗ: ಪತಂಜಲಿ ಯೋಗ ಸಮಿತಿ ಸದಸ್ಯರು ಸಾಮೂಹಿಕ ಯೋಗ ಪ್ರದರ್ಶನ ನಡೆಸಿದರು.
‘ಭಾರತೀಯ ಸಂಸ್ಕೃತಿಯಾದ ಯೋಗವು ಇಂದು ವಿಶ್ವ ಸಂಸ್ಕೃತಿಯಾಗಿ ಬೆಳೆದಿದೆ. ಇಡೀ ವಿಶ್ವವೇ ಯೋಗದ ಮಹತ್ವ ಅರಿತು ಯೋಗ ದಿನ ಆಚರಿಸುತ್ತಿದೆ. ಆ ಮೂಲಕ ಭಾರತ ದೇಶದ ಸಂಸ್ಕೃತಿಯನ್ನು ಗೌರವಿಸುತ್ತಿದೆ’ ಎಂದು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಬಿಸಪ್ಪಗೌಡ ಅಭಿಪ್ರಾಯಪಟ್ಟರು.
ಸಮಿತಿ ಗೌರವಾಧ್ಯಕ್ಷ ನಂಜುಂಡಯ್ಯ ಶ್ರೇಷ್ಠಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಉಪಾಧ್ಯಕ್ಷ ಜನಾರ್ದನ್ ಪಾಲ್ಗೊಂಡರು.