ಉತ್ಸಾಹದಿಂದ ಯುವಜನತೆ ರಕ್ತದಾನ

ಕೋಲಾರ: ಸಾವಿರಾರು ಯುವಜನತೆ, ಸರ್ಕಾರಿ ನೌಕರರು, ವಿವಿಧ ಕಂಪನಿಗಳ ಕಾರ್ಮಿಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾನುವಾರ ಇಲ್ಲಿ ರಕ್ತದಾನ ಮಾಡಿದರು. ನೂರಾರು ಮಂದಿ ಅಂಗಾಂಗ ದಾನ ಮಾಡಲು ತಮ್ಮ ಹೆಸರು ನೋಂದಾಯಿಸಿಕೊಂಡರು.
ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾಡಳಿತದಿಂದ ಮೋದಿ @ 2022 ಅಭಿಯಾನದಡಿ ನಗರದ ಒಳಾಂಗಣ ಕ್ರೀಡಾಂಗಣ ಹಾಗೂ ಜೂನಿಯರ್ ಕಾಲೇಜು ಆವರಣದಲ್ಲಿನ ಕೊಠಡಿಗಳಲ್ಲಿ ರಕ್ತದಾನ ಬೃಹತ್ ಶಿಬಿರದ ಜೊತೆಗೆ ಅಂಗಾಂಗ ದಾನ ನೋಂದಣಿ ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ಆರಂಭಗೊಂಡು ಸಂಜೆ 6ಕ್ಕೆ ಮುಕ್ತಾಯಗೊಂಡಿತು.
ಜಿಲ್ಲೆಯ ಮಟ್ಟಿಗೆ ಹೊಸ ದಾಖಲೆ ನಿರ್ಮಾಣವಾಗಿದ್ದು, ಸುಮಾರು 2,500 ಯುನಿಟ್ ರಕ್ತ ಸಂಗ್ರಹವಾಗಿದೆ ಎಂದು ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.
‘15 ಸಾವಿರ ಜನರಿಂದ ರಕ್ತದಾನ ಮಾಡಿಸುವ ಗುರಿ ಹೊಂದಲಾಗಿತ್ತು. ಆದರೆ, ರಕ್ತದ ದಾಸ್ತಾನಿಗೆ ತೊಂದರೆ ಆಗಲಿದೆ ಎಂದು ರಕ್ತ ಸಂಗ್ರಹ ಕೇಂದ್ರದ ಪ್ರತಿನಿಧಿಗಳು ಹೇಳಿದ್ದರಿಂದ 10 ಸಾವಿರಕ್ಕೆ ನಿರ್ಬಂಧಿಸಲಾಯಿತು’ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಂಸದ ತೇಜಸ್ವಿ ಸೂರ್ಯ ಶಿಬಿರ ವೀಕ್ಷಿಸಿದರು. ಅಲ್ಲದೇ, ರಕ್ತದಾನಿಗಳಿಗೆ ಶುಭಾಶಯ ಕೋರಿ, ಪ್ರಮಾಣಪತ್ರ ವಿತರಿಸಿದರು. ರಕ್ತದಾನ ಮಾಡಿದ ಎಲ್ಲರಿಗೂ ಜ್ಯೂಸ್, ಸೇಬು, ಬಾಳೆಹಣ್ಣು ವ್ಯವಸ್ಥೆ ಮಾಡಲಾಗಿತ್ತು. ಹೊರ ಆವರಣದಲ್ಲಿ ನೋಂದಣಿ ಕೌಂಟರ್ ತೆರೆಯಲಾಗಿತ್ತು.
ಜಿಲ್ಲಾಡಳಿತ ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ, ಮಾಹಿತಿ ಮಳಿಗೆ ಹಾಕಲಾಗಿತ್ತು. ಸರ್ಕಾರದಿಂದ ಸಾರ್ವಜನಿಕರಿಗೆ ಸಿಗಬಹುದಾದ ವಿವಿಧ ಇಲಾಖೆಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಯಿತು. ಖಾದಿ ಮಳಿಗೆಗಳೂ ಇದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.