ಶ್ರೀನಿವಾಸಪುರ: ಯುವ ಜನಾಂಗ ನಾಡಿನ ಪರಂಪರೆ ಬಗ್ಗೆ ಹೆಮ್ಮೆ ಇಟ್ಟುಕೊಳ್ಳಬೇಕು. ಆಗ ಮಾತ್ರ ನಮ್ಮ ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅರ್ಥೈಸಿಕೊಳ್ಳಲು ಸಾಧ್ಯ ಎಂದು ಸಾಹಿತಿ ಸ.ರಘುನಾಥ ಹೇಳಿದರು.
ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಶ್ರೀನಿವಾಸಪುರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಎನ್ಎಸ್ಎಸ್ ಘಟಕದ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು.
ವೆಂಕಟೇಶ್ವರ ಆರೋಗ್ಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ವೆಂಕಟಾಚಲ ಮಾತನಾಡಿ, ಗ್ರಾಮ ನೈರ್ಮಲ್ಯ ಮತ್ತು ವೈಯಕ್ತಿಕ ಸ್ವಚ್ಛತೆ ಇಂದಿನ ಅಗತ್ಯವಾಗಿದೆ. ಅನಾರೋಗ್ಯಕರ ಪರಿಸರ ಹಲವು ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತಿದೆ. ವಿದ್ಯಾವಂತ ಸಮುದಾಯ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯದ ಮಹತ್ವ ಕುರಿತು ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಜಿ.ಎನ್.ಗೋವಿಂದರೆಡ್ಡಿ ಮಾತನಾಡಿ, ವಿದ್ಯಾವಂತ ಯುವಕರು ಗ್ರಾಮಾಭಿವೃದ್ಧಿಯಲ್ಲಿ ತಮ್ಮನ್ನು ಪ್ರಾಮಾಣಿಕವಾಗಿ ತೊಡಗಿಸಿ ಕೊಳ್ಳಬೇಕು ಎಂದು ಹೇಳಿದರು.
ತಾ.ಪಂ. ಸದಸ್ಯ ಬಿ.ಗುರಪ್ಪ, ಮಾಜಿ ಸದಸ್ಯ ಬಿ.ಎಸ್.ಗುರುಪ್ಪ, ಶಿಬಿರದ ಅಧಿಕಾರಿ ಕೃಷ್ಣಪ್ಪ, ಉಪನ್ಯಾಸಕ ರಂಗಸ್ವಾಮಿ ಗ್ರಾಪಂ ಮಾಜಿ ಸದಸ್ಯೆ ಲಚ್ಚಕ್ಕ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳಾದ ತಿಮ್ಮರಾಜು ಸ್ವಾಗತಿಸಿದರು. ಜಿ.ಮಂಜುನಾಥ ವಂದಿಸಿದರು.