ಕನಕಗಿರಿ: ‘ಹಾನಿಗೊಳಗಾದ ಸ್ಮಾರಕ ಕಟ್ಟಡದ ಮರು ನಿರ್ಮಾಣಕ್ಕೆ 3ಡಿ ತಂತ್ರಜ್ಞಾನ ಸಹಕಾರಿಯಾಗಿದೆ‘ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಮಂಡಳಿ ತಾಂತ್ರಿಕ ಸಹಾಯಕ ರಾಜಶೇಖರ ತಿಳಿಸಿದರು.
ಇಲ್ಲಿನ ಕನಕಾಚಲಪತಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಸ್ಮಾರಕಗಳ ಡಿಜಿಟಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿರುವ ಸ್ಮಾರಕಗಳ ಡಿಜಿಟಲೀಕರಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, ಮೈಸೂರು ವಿಭಾಗದಲ್ಲಿ 125 ಹಾಗೂ ಬೆಂಗಳೂರು ವಿಭಾಗದಲ್ಲಿ 105 ಸ್ಮಾರಕಗಳನ್ನು ಡಿಜಿಟಲೀಕರಣಗೊಳಿಸುವ ಕೆಲಸ ಮುಗಿದಿದೆ. ಕಲಬುರ್ಗಿ ವಿಭಾಗದ ಬಳ್ಳಾರಿ ಜಿಲ್ಲೆಯಲ್ಲಿಯೂ ಪೂರ್ಣಗೊಳಿಸಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 31 ಸ್ಮಾರಕಗಳನ್ನು ಡಿಜಿಟಲೀಕರಣಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಭವಿಷ್ಯದಲ್ಲಿ ಸ್ಮಾರಕಗಳು ನಾಶವಾದರೆ ಮರು ನಿರ್ಮಾಣಗೊಳಿಸಲು ಈ ಡಿಜಿಟಲೀಕರಣ ಸಹಾಯಕವಾಗಲಿದೆ. ಪಾರಂಪರಿಕ ಕಟ್ಟಡ, ಅರಮನೆ, ಸ್ಮಾರಕಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ದೇವಸ್ಥಾನ ಸಮಿತಿ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಯೋಜನಾ ಸಹಾಯಕರಾದ ಡಿ.ಎ.ಸಚಿನ್, ಅನಿಲಕುಮಾರ, ಪ್ರಮುಖರಾದ ದುರ್ಗಾದಾಸ ಯಾದವ, ಹನುಮೇಶ ಮಹಿಪತಿ ಇದ್ದರು.